ನೆರೆ ಪರಿಹಾರ ನಿಧಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ 1 ಕೋಟಿ ರೂ.ನೆರವು
ಬೆಂಗಳೂರು, ಆ.21: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ನೆರೆ ಸಂತ್ರಸ್ಥರ ಪುನರ್ವಸತಿಗಾಗಿ ಮುಖ್ಯಮಂತ್ರಿ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಒಂದು ಕೋಟಿ ರೂ.ನೆರವು ನೀಡುತ್ತಿದ್ದೇವೆಂದು ಅಧ್ಯಕ್ಷ ಡಾ.ಸುಧಾಕರ್ ತಿಳಿಸಿದರು.
ಬುಧವಾರ ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣಾದಲ್ಲಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿ, ನೆರೆ ಸಂತ್ರಸ್ಥರ ಪರಿಹಾರ ನಿಧಿಗೆ ಒಂದು ಕೋಟಿ ರೂ. ಚೆಕ್ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲಪ್ರವಾಹದಿಂದ ರಾಜ್ಯದ ಅರ್ಧ ಭಾಗದ ಜನತೆ ತತ್ತರಿಸಿ ಹೋಗಿದ್ದಾರೆ. ಅವರಿಗೆ ಸಹಾಯ ಮಾಡುವುದು ಪ್ರತಿಯೊಬ್ಬರ ಕರ್ತವ್ಯವೆಂದು ತಿಳಿಸಿದರು.
ನೆರೆ ಸಂತ್ರಸ್ಥರಿಗೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದಲೂ ಆರ್ಥಿಕ ಸಹಾಯ ಮಾಡಲಾಗುವುದು. ಇದೇ ಮಾದರಿಯಲ್ಲಿ ಕೈಗಾರಿಕೋದ್ಯಮಿಗಳು ಸೇರಿದಂತೆ ಆರ್ಥಿಕವಾಗಿ ಬಲವುಳ್ಳವರು ಉದಾರವಾಗಿ ಆರ್ಥಿಕ ನೆರವು ನೀಡುವ ಮೂಲಕ ನಿರಾಶ್ರಿತರ ಬದುಕನ್ನು ಹಸನುಗೊಳಿಸಬೇಕೆಂದು ಅವರು ಹೇಳಿದರು.
ಶಾಸಕರ ಅನರ್ಹತೆಯ ಪ್ರಕರಣವು ಸುಪ್ರೀಂ ಕೋರ್ಟ್ನಲ್ಲಿ ಇರುವುದರಿಂದ ನಮ್ಮ ಪರ ವಕೀಲರನ್ನು ಭೇಟಿ ಮಾಡಿ ಚರ್ಚಿಸಲು ನಾವೆಲ್ಲರೂ ದೆಹಲಿಗೆ ಹೋಗುತ್ತಿದ್ದೇವೆ. ನಾವೆಲ್ಲರೂ ಒಟ್ಟಿಗೆ ಇದ್ದು, ಏನೇ ಕ್ರಮಗಳನ್ನು ಕೈಗೊಂಡರು ಒಂದಾಗಿ ತೀರ್ಮಾನಿಸುತ್ತೇವೆಂದು ಅವರು ಹೇಳಿದರು.