ಪಿ.ಚಿದಂಬರಂ ಬಂಧನದ ಬಗ್ಗೆ ಎಚ್.ಡಿ.ದೇವೇಗೌಡ ಪ್ರತಿಕ್ರಿಯಿಸಿದ್ದು ಹೀಗೆ...
![ಪಿ.ಚಿದಂಬರಂ ಬಂಧನದ ಬಗ್ಗೆ ಎಚ್.ಡಿ.ದೇವೇಗೌಡ ಪ್ರತಿಕ್ರಿಯಿಸಿದ್ದು ಹೀಗೆ... ಪಿ.ಚಿದಂಬರಂ ಬಂಧನದ ಬಗ್ಗೆ ಎಚ್.ಡಿ.ದೇವೇಗೌಡ ಪ್ರತಿಕ್ರಿಯಿಸಿದ್ದು ಹೀಗೆ...](https://www.varthabharati.in/sites/default/files/images/articles/2019/08/22/206444-1566484483.jpg)
ಬೆಂಗಳೂರು, ಆ.22: ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ನಿನ್ನೆ(ಬುಧವಾರ) ರಾತ್ರಿ ಬಂಧಿಸಿದ ಕ್ರಮಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬೇಸರ ವ್ಯಕ್ತಪಡಿಸಿದರು.
ಗುರುವಾರ ನಗರದ ಜೆಡಿಎಸ್ ಕಚೇರಿ(ಜೆ.ಪಿ.ಭವನ)ಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಇತಿಹಾಸದಲ್ಲಿ ಈ ರೀತಿಯ ಘಟನೆ ಹಿಂದೆಂದೂ ನಡೆದ ಉದಾಹರಣೆಯಿಲ್ಲ ಎಂದರು.
ಚಿದಂಬರಂ ವಿರುದ್ಧದ ಆರೋಪಗಳ ಬಗ್ಗೆ ನನಗೆ ಹೆಚ್ಚಿನ ಮಾಹಿತಿಯಿಲ್ಲ. ಚಿದಂಬಂರ ಬಂಧನದ ಕುರಿತು ಅವರ ಪುತ್ರ ನೀಡಿರುವ ಪ್ರತಿಕ್ರಿಯೆಗಳನ್ನು ಗಮನಿಸಿದ್ದೇನೆ. ಯಾವ ಕಾರಣಕ್ಕಾಗಿ ಈ ಘಟನೆ ನಡೆದಿದೆ ಅನ್ನೋದು ಗೊತ್ತಿಲ್ಲ ಎಂದು ಅವರು ಹೇಳಿದರು.
ಈ ಹಿಂದೆ ಅಮಿತ್ ಶಾರನ್ನು ಬಂಧಿಸಿದಕ್ಕಾಗಿ ಪ್ರತಿಕಾರವಾಗಿ ಚಿದಂಬರಂರನ್ನು ಬಂಧಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಆ ಬಗ್ಗೆಯೂ ನನಗೆ ಏನು ಗೊತ್ತಿಲ್ಲ. ಈ ಪ್ರಕರಣದ ಯಾವ ಹಂತಕ್ಕೆ ಹೋಗಿ ನಿಲ್ಲುತ್ತದೋ ನೋಡೋಣ ಎಂದು ದೇವೇಗೌಡ ತಿಳಿಸಿದರು.
ಬಿಜೆಪಿ ಶಾಸಕ ಉಮೇಶ್ ಕತ್ತಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯನ್ನು ಭೇಟಿ ಮಾಡಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ. ಊಹಾಪೋಹಗಳ ಸುದ್ದಿಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ನಮ್ಮದು ಸಣ್ಣ ಪಕ್ಷ, ಅದನ್ನು ಉಳಿಸಿಕೊಂಡು ಮುಂದುವರೆಯುತ್ತಿದ್ದೇವೆ ಎಂದು ಅವರು ಹೇಳಿದರು.