ಕ್ರೀಡಾಂಗಣದ ಸಜ್ಜಾ ಕುಸಿದು ಬಿದ್ದು ಇಬ್ಬರು ವಿದ್ಯಾರ್ಥಿಗಳು ಮೃತ್ಯು
![ಕ್ರೀಡಾಂಗಣದ ಸಜ್ಜಾ ಕುಸಿದು ಬಿದ್ದು ಇಬ್ಬರು ವಿದ್ಯಾರ್ಥಿಗಳು ಮೃತ್ಯು ಕ್ರೀಡಾಂಗಣದ ಸಜ್ಜಾ ಕುಸಿದು ಬಿದ್ದು ಇಬ್ಬರು ವಿದ್ಯಾರ್ಥಿಗಳು ಮೃತ್ಯು](https://www.varthabharati.in/sites/default/files/images/articles/2019/08/23/206638-1566575703.jpg)
ಬಳ್ಳಾರಿ, ಆ.23: ಕ್ರೀಡಾಂಗಣದ ಮೆಟ್ಟಿಲಿನ ಸಜ್ಜಾ ಬಿದ್ದು ಇಬ್ಬರು ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಜನರಿಗೆ ಗಾಯಗಳಾಗಿರುವ ಘಟನೆ ಇಲ್ಲಿನ ಸಿರಗುಪ್ಪತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ.
ಸಿರಗುಪ್ಪಶಿವು (32), ಬೆಳಗಲ್ಲು ಗ್ರಾಮದ ರಾಮು (18) ಮೃತ ವಿದ್ಯಾರ್ಥಿಗಳೆಂದು ತಿಳಿದುಬಂದಿದ್ದು, ಗಾಯಗೊಂಡಿರುವ ವಿದ್ಯಾರ್ಥಿಗಳನ್ನು ಸಿರಗುಪ್ಪ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿರಗುಪ್ಪ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಹಚ್ಚೋಳ್ಳಿ ವಲಯ ಮಟ್ಟದ ಕ್ರೀಡಾಕೂಟ ನಡೆಯುತ್ತಿತ್ತು. ಇದನ್ನು ನೋಡಲೆಂದು ವಿದ್ಯಾರ್ಥಿಗಳು ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕ್ರೀಡಾಂಗಣದ ಮೆಟ್ಟಿಲಿನ ಸಜ್ಜಾ ಕುಸಿಯಿತು ಎನ್ನಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಂಗಣದಲ್ಲಿ ಜಮಾಯಿಸುತ್ತಿದ್ದಾರೆ. ಜನರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿರುವ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದು, ಈ ಸಂಬಂಧ ಸಿರಗುಪ್ಪಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಪಂ ಸಿಇಒ ನಿತೀಶ್, ಎಸ್ಪಿಸಿ.ಕೆ. ಬಾಬಾ, ಶಾಸಕ ಸೋಮಲಿಂಗಪ್ಪಭೇಟಿ ನೀಡಿ ಪರಿಶೀಲನೆ ನಡೆಸಿದರು.