ಬಿಲ್ಲವ ಸಮಾಜ ಸಂಘದಿಂದ 812 ಮಂದಿಗೆ ವಿದ್ಯಾರ್ಥಿ ವೇತನ ವಿತರಣೆ
ಕುಂದಾಪುರ, ಆ.25: ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಶ್ರೀ ನಾರಾಯಣಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆ, ಶ್ರೀ ನಾರಾಯಣಗುರು ಯುವಕ ಮಂಡಲ ಹಾಗೂ ಬಿಲ್ಲವ ಮಹಿಳಾ ಘಟಕದ ಸಹಯೋಗದಲ್ಲಿ 28ನೇ ವರ್ಷದ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಅಭಿನಂದನಾ ಸಮಾರಂಭ ರವಿವಾರ ಕುಂದಾಪುರ ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಜರಗಿತು.
ಮುಖ್ಯ ಅತಿಥಿಯಾಗಿ ಕುಂದಾಪುರ ಸೌಹಾರ್ದ ಕೋಆಪರೇಟಿವ್ ಸೊಸೈಟಿ ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಂಡು ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರುವ ಮೂಲಕ ಹೆತ್ತವರು, ಶಾಲೆ ಹಾಗೂ ನಮ್ಮ ಸಮಾಜಕ್ಕೆ ಒಳ್ಳೆಯ ಹೆಸರು ತರುವಂತಾಬೇಕು ಎಂದು ಶುಭಹಾರೈಸಿದರು.
ಸಮಾರಂಭವನ್ನು ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ನಾರಾಯಣ ಬಿಲ್ಲವ ಹಳೆ ಅಳಿವೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಎಸೆಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಯ ಒಟ್ಟು 812 ವಿದ್ಯಾರ್ಥಿಗಳಿಗೆ ಒಟ್ಟು 8 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಕಳೆದ ಶೈಕ್ಷಣಿಕ ಸಾಲಿನಲ್ಲಿ ಶೇ.95 ಕ್ಕಿಂತ ಅಧಿಕ ಅಂಕ ಗಳಿಸಿದ ಎಸೆಸೆಲ್ಸಿಯಲ್ಲಿ ವ್ನಿೇಶ್ ನೇರಳಕಟ್ಟೆ, ಕೀರ್ತಿ ಕೋಡಿ, ಮೈನಾ ಶಿರೂರು, ದಿವ್ಯಾ ನಾವುಂದ, ಪಿಯುಸಿಯಲ್ಲಿ ಸುಮಾ ಅಸೋಡು, ಅಕ್ಷತಾ ಬೈಂದೂರು, ಪದವಿಯಲ್ಲಿ ಐಶ್ವರ್ಯ ಬೀಜಾಡಿ, ಸುಪ್ರೀತಾ ಜಡ್ಕಲ್, ನೇತ್ರಾವತಿ ಬೈಂದೂರು, ಸ್ಫೂರ್ತಿ ಕೋಟೇಶ್ವರ, ಸ್ನಾತಕೋತ್ತರ ಪದವಿಯಲ್ಲಿ ಸುಜನ್ ಆಲೂರು ಅವರನ್ನು ಅಭಿನಂದಿಸಲಾಯಿತು.
ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ಬಿಜೂರು, ಯುವಕ ಮಂಡಲದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಬಿಲ್ಲವ ಸಮಾಜ ಸೇವಾ ಸಂಘದ ಕೋಶಾಧಿಕಾರಿ ಟಿ.ಕೆ. ಕೋಟ್ಯಾನ್, ಸದಸ್ಯರಾದ ವಿಠಲ ಪೂಜಾರಿ, ಗುಣರತ್ನಾ, ಚಂದ್ರ ಅಮೀನ್, ಗಣೇಶ ವಿಠಲವಾಡಿ ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಮಂಜು ಬಿಲ್ಲವ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ರಾಜೇಶ್ ಕಡ್ಗಿ ವಂದಿಸಿದರು. ಶ್ರೀ ನಾರಾಯಣಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಭಾಸ್ಕರ ವಿಲ ವಾಡಿ ಕಾರ್ಯಕ್ರಮ ನಿರೂಪಿಸಿದರು.