‘ಪಾಕಿಸ್ತಾನದಿಂದ ಇನ್ನಷ್ಟು ನೀರು ಬಿಡುಗಡೆ: ಪಂಜಾಬಿನ ಗಡಿಗ್ರಾಮಗಳಲ್ಲಿ ನೆರೆಯ ಭೀತಿ
ಚಂಡಿಗಡ,ಆ.25: ಪಾಕಿಸ್ತಾನವು ಸಟ್ಲೆಜ್ ನದಿ ನೀರನ್ನು ನೀರಾವರಿ ಕಾಲುವೆಗೆ ತಿರುಗಿಸಲು ಕಸೂರ್ನಲ್ಲಿ ನಿರ್ಮಿಸಿರುವ ಜಲಾಶಯದ ದ್ವಾರಗಳನ್ನು ತೆರದು ಭಾರೀ ಪ್ರಮಾಣದಲ್ಲಿ ನೀರನ್ನು ಹೊರಗೆ ಬಿಟ್ಟಿರುವುದರಿಂದ ಭಾರತ-ಪಾಕ್ ಗಡಿಯಲ್ಲಿರುವ ಪಂಜಾಬಿನ ಫಿರೋಝ್ಪುರ ಜಿಲ್ಲೆಯ ಸುಮಾರು 15 ಗ್ರಾಮಗಳು ಪ್ರವಾಹದ ಭೀತಿಯನ್ನು ಎದುರಿಸುತ್ತಿವೆ.
ಜಿಲ್ಲಾಡಳಿತವು ಕಟ್ಟೆಚ್ಚರವನ್ನು ವಹಿಸಿದ್ದು,ಯಾವುದೇ ತುರ್ತು ಸಂದರ್ಭವನ್ನು ಎದುರಿಸಲು ಎನ್ಡಿಆರ್ಎಫ್ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ನಿರ್ದೇಶದಂತೆ ಜಲ ಸಂಪನ್ಮೂಲ ಇಲಾಖೆಯು ಇತರ ಗ್ರಾಮಗಳು ಪ್ರವಾಹಕ್ಕೆ ತುತ್ತಾಗುವ ಅಪಾಯವನ್ನು ತಪ್ಪಿಸಲು ಜಿಲ್ಲೆಯ ಟೆಂಡಿವಾಲಾ ಗ್ರಾಮದಲ್ಲಿ ಹಾನಿಗೀಡಾಗಿರುವ ಒಡ್ಡುಗಳನ್ನು ಬಲಗೊಳಿಸುವ ಕಾರ್ಯವನ್ನು ಸಮರೋಪಾದಿಯಲ್ಲಿ ನಡೆಸುತ್ತಿದೆ. ಇದೇ ವೇಳೆ ನೆರೆಪೀಡಿತ ಪಂಜಾಬಿನಲ್ಲಿ ಪ್ರವಾಹದಿಂದ ಉಂಟಾಗಿರುವ ಹಾನಿ ಮತ್ತು ನಷ್ಟವನ್ನು ಪರಿಶೀಲಿಸಲು ಕೇಂದ್ರೀಯ ತಂಡವೊಂದನ್ನು ಕಳುಹಿಸಲು ಕೇಂದ್ರ ಗೃಹ ಸಚಿವಾಲಯವು ನಿರ್ಧರಿಸಿದೆ.
ರವಿವಾರ ಉನ್ನತ ಮಟ್ಟದ ಸಭೆಯೊಂದನ್ನು ನಡೆಸಿದ ಮುಖ್ಯಮಂತ್ರಿಗಳು ಫಿರೋಝ್ಪುರ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿಯ ಪ್ರವಾಹ ಸ್ಥಿತಿಯನ್ನು ಪುನರ್ಪರಿಶೀಲಿಸಿದರು.
ಕಸೂರ್ನಿಂದ ಬಿಡುಗಡೆಗೊಳಿಸುವ ನೀರು ಫಿರೋಝ್ಪುರ ಜಿಲ್ಲೆಯಿಂದ ಮೊದಲು ಪಾಕಿಸ್ತಾನಕ್ಕೆ ಹರಿದು ಬಳಿಕ ಜಿಲ್ಲೆಗೆ ಮರಳುತ್ತದೆ. ಈ ವಿದ್ಯಮಾನವು ಹಲವಾರು ಬಾರಿ ನಡೆಯುತ್ತದೆ ಮತ್ತು ನೀರು ಅಂಕುಡೊಂಕಾಗಿ ಹರಿಯುತ್ತಿರುತ್ತದೆ.
ಪಾಕಿಸ್ತಾನವು ಭಾರೀಪ್ರಮಾಣದಲ್ಲಿ ನೀರು ಬಿಡುಗಡೆಗೊಳಿಸಿರುವುದರಿಂದ ಟೆಂಡಿವಾಲಾ ಗ್ರಾಮದಲ್ಲಿಯ ಒಡ್ಡುಗಳು ಹಾನಿಗೀಡಾಗಿದ್ದು,ಸಮೀಪದ ಗಾಮಗಳಲ್ಲಿ ಪ್ರವಾಹದ ಭೀತಿಯನ್ನು ಹುಟ್ಟುಹಾಕಿದೆ. ಸಂಭಾವ್ಯ ಪ್ರವಾಹ ಪ್ರದೇಶಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ.