ನೆರೆ ಪೀಡಿತರ ಅಗತ್ಯ ವಸ್ತುಗಳ ಪೂರೈಕೆ ವಾಹನಕ್ಕೆ ನ್ಯಾ.ಎ.ಎಸ್.ಓಕಾ ಹಸಿರು ನಿಶಾನೆ
ಬೆಂಗಳೂರು, ಆ.25: ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ನೆರವಿಗೆ 20 ಲಕ್ಷಕ್ಕೂ ಹೆಚ್ಚು ಹಣ ಮತ್ತು ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಲಾಗಿದೆ ಎಂದು ಬೆಂಗಳೂರು ವಕೀಲರ ಸಂಘ ತಿಳಿಸಿದೆ.
ಬೆಳಗಾವಿ ಜಿಲ್ಲೆಯ ನೆರೆಪೀಡಿತ ವಕೀಲರಿಗೆ ಅಗತ್ಯ ಸಾಮಗ್ರಿ ವಿತರಿಸಲಾಗುತ್ತಿದ್ದು, ಸಾಮಗ್ರಿಗಳನ್ನು ಹೊತ್ತೊಯ್ಯುತ್ತಿರುವ ವಾಹನಕ್ಕೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಹೈಕೋರ್ಟ್ ಆವರಣದಲ್ಲಿ ಹಸಿರು ನಿಶಾನೆ ತೋರಿದರು.
ಈ ವೇಳೆ ಮಾತನಾಡಿದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಅವರು, ಸಂತ್ರಸ್ತರಿಗಾಗಿ 250 ಅಕ್ಕಿಮೂಟೆ, ಬಟ್ಟೆ, ದವಸ ಧಾನ್ಯ, ವಿವಿಧ ಔಷಧಿಗಳು, ಬ್ಲಾಂಕೆಟ್ಗಳು ಮತ್ತು ಬಟ್ಟೆ ಸೇರಿ ಸಾಕಷ್ಟು ಅಗತ್ಯ ವಸ್ತುಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
164 ವಕೀಲರು ತೊಂದರೆಗೆ ಸೀಲುಕಿದ್ದು, ಪ್ರತಿಯೊಬ್ಬ ಕುಟುಂಬಕ್ಕೆ 10 ರಿಂದ 15 ಸಾವಿರ ಸಹಾಯ ಒದಗಿಸಲಾಗುವುದು. ಈ ಬಾರಿ ಬೆಳಗಾವಿ ಜಿಲ್ಲೆಯಲ್ಲಿನ ವಕೀಲರಿಗೆ ಮಾತ್ರ ಪರಿಹಾರ ಸಾಮಗ್ರಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಭಾಗದ ನೆರೆ ಪೀಡಿತ ಪ್ರದೇಶಗಳಿಗೂ ತೆರಳಿ ಸಂತ್ರಸ್ಥ ವಕೀಲರಿಗೆ ನೆರವು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರು ವಕೀಲರದ ಸಂಘದ ಪ್ರಧಾನ ಕಾರ್ಯದರ್ಶಿ ಎ.ಎನ್.ಗಂಗಾಧರಯ್ಯ, ಖಜಾಂಚಿ ಶಿವಮೂರ್ತಿ, ಎನ್.ಪಿ.ಅಮೃತೇಶ್, ಕೆ.ಎನ್.ಪುಟ್ಟೇಗೌಡ ವುತ್ತು ವಕೀಲರು ಉಪಸ್ಥಿತರಿದ್ದರು.