ಯೋಧನ ಸಂಬಂಧಿಗಳಿಗೆ ಹಲ್ಲೆ ಪ್ರಕರಣ: ತನಿಖೆಗೆ ಆದೇಶಿಸಿದ ಕಮಲ್ನಾಥ್

ಭೋಪಾಲ, ಆ.26: ಪ್ರವಾಸಿ ತಾಣದ ವೀಕ್ಷಣೆಗೆ ತೆರಳಿದ್ದ ಸಂದರ್ಭ ತನ್ನ ಕುಟುಂಬದ ಸದಸ್ಯರು ಹಾಗೂ ಸಂಬಂಧಿಗಳ ಸ ಮೇಲೆ ಭದ್ರತಾ ಸಿಬಂದಿ ಹಲ್ಲೆ ನಡೆಸಿದ್ದಾರೆ ಎಂದು ಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್ ಪಡೆಯ ಯೋಧ ಮಾಡಿರುವ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ಆದೇಶಿಸಿದ್ದಾರೆ.
ಆರೋಪ ಮಾಡಿರುವ ಹವಾಲ್ದಾರ್ ಅಮಿತ್ ಸಿಂಗ್ , ಈ ಬಗ್ಗೆ ದೂರು ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ತನಗೆ ನ್ಯಾಯ ಸಿಗದಿದ್ದರೆ ತಾನು ಮುಂದಿನ ಪಾನ್ ಸಿಂಗ್ ತೋಮರ್ (ಬಂಡುಗೋರನಾಗಿ ಬದಲಾದ ಯೋಧ) ಆಗುತ್ತೇನೆ ಎಂದು ಫೇಸ್ಬುಕ್ನಲ್ಲಿ ಹೇಳಿಕೆ ನೀಡಿದ್ದಾರೆ. ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಪ್ರಸಿದ್ಧ ಪ್ರವಾಸೀ ತಾಣದ ವೀಕ್ಷಣೆಗೆ ತೆರಳಿದ್ದ ತನ್ನ ಕುಟುಂಬದ ಸದಸ್ಯರ ಮೇಲೆ ಭದ್ರತಾ ಸಿಬಂದಿ ಹಲ್ಲೆ ನಡೆಸಿದ್ದು ಓರ್ವನ ಕಾಲಿಗೆ ಗಾಯವಾಗಿದೆ. ಇನ್ನೋರ್ವ ಶೇ.80ರಷ್ಟು ಶ್ರವಣ ಶಕ್ತಿಯನ್ನು ಕಳೆದುಕೊಂಡಿದ್ದಾನೆ ಎಂದು ಅಮಿತ್ ಸಿಂಗ್ ಹೇಳಿದ್ದಾರೆ.
ಘಟನೆಯ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಕಮಲನಾಥ್ ಸೋಮವಾರ ಆದೇಶಿಸಿದ್ದಾರೆ. ನನ್ನ ಆಡಳಿತದಲ್ಲಿ ಯಾರಿಗೂ ಅನ್ಯಾಯವಾಗದು. ಸೂಕ್ತ ತನಿಖೆಯ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದವರು ಹೇಳಿದ್ದಾರೆ. ಮುಖ್ಯಮಂತ್ರಿಯವರ ಹೇಳಿಕೆ ಬಗ್ಗೆ ಅಭಿನಂದನೆ ಸಲ್ಲಿಸಿರುವ ಸಿಂಗ್, ಯಾರಿಗೂ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುವ ಭರವಸೆಯಿದೆ ಎಂದಿದ್ದಾರೆ.
ಘರ್ಷಣೆಯಲ್ಲಿ ಎರಡೂ ಕಡೆಯವರು ಗಾಯಗೊಂಡಿದ್ದಾರೆ. ಭದ್ರತಾ ಸಿಬಂದಿಯ ವಿರುದ್ಧ ಹಾಗೂ ಗುರುತು ತಿಳಿಯದ 15 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಖಾಂಡ್ವಾ ಪೊಲೀಸ್ ಅಧೀಕ್ಷಕ ಶಿವಪಾಲ್ ಯಾದವ್ ಹೇಳಿದ್ದಾರೆ.