ಜಮ್ಮು ಕಾಶ್ಮೀರ: ಕಲ್ಲೆಸೆತ ಘಟನೆಯಲ್ಲಿ ಓರ್ವ ಸಾವು, ಓರ್ವನ ಬಂಧನ

ಶ್ರೀನಗರ,ಆ.26: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ರವಿವಾರ ಸಂಜೆ ಕಲ್ಲೆಸೆತ ಘಟನೆಯಲ್ಲಿ ಓರ್ವ ಟ್ರಕ್ ಚಾಲಕ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನಂತನಾಗ್ ಜಿಲ್ಲೆಯ ಬಿಜ್ಬೆಹರ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ ಪ್ರತಿಭಟನಾಕಾರರು ಟ್ರಕ್ಅನ್ನು ರಕ್ಷಣಾಪಡೆಯ ವಾಹನ ಎಂದು ತಪ್ಪಾಗಿ ಭಾವಿಸಿ ಕಲ್ಲುಗಳನ್ನು ಎಸೆದಿದ್ದರು. ಪರಿಣಾಮವಾಗಿ ಟ್ರಕ್ ಚಾಲಕ, ಬಿಜ್ಬೆಹರ ನಿವಾಸಿ ನೂರ್ ಮುಹಮ್ಮದ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಕಲ್ಲು ಟ್ರಕ್ನ ಗಾಜನ್ನು ಪುಡಗಟ್ಟಿ ನೂರ್ ಮುಹಮ್ಮದ್ ಅವರ ತಲೆಗೆ ತಾಗಿದೆ. ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ನಂತರ ಶ್ರೀನಗರದ ಹೊರವಲಯ ಸೌರದಲ್ಲಿರುವ ಶೇರೆ ಕಾಶ್ಮೀರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸಾಗಿಸಲಾಗಿತ್ತು. ಆದರೆ ಅಲ್ಲಿನ ವೈದ್ಯರು ನೂರ್ ಅದಾಗಲೇ ಮೃತಪಟ್ಟಿರುವುದಾಗಿ ತಿಳಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸದ್ಯ ಓರ್ವ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಕೆಲದಿನಗಳ ಹಿಂದೆ ಶ್ರಿನಗರದಲ್ಲಿ ನಡೆದ ಕಲ್ಲೆಸೆತ ಪ್ರಕರಣದಲ್ಲಿ ಓರ್ವ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದು ಘಟನೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.