ಸಂಘಪರಿವಾರ, ಪ್ರಧಾನಿ ಕುರಿತು ಅವಮಾನಕರ ಪೋಸ್ಟ್: ವ್ಯಕ್ತಿಯ ಬಂಧನ
ನಾಗ್ಪುರ, ಆ. 26: ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಘಪರಿವಾರದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅವಮಾನಕಾರಿ ಪೋಸ್ಟ್ ಮಾಡಿರುವ ಆರೋಪದಲ್ಲಿ ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಬಲಿರಾಜ್ ದೋತೆ ಎಂದು ಗುರುತಿಸಲಾಗಿದ್ದು ಈತ ಸ್ವಾಭಿಮಾನ ಚಳುವಳಿ ಎಂಬ ಅಭಿಯಾನ ನಡೆಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಲಿರಾಜ್ ಹಾಕಿದ್ದ ಪೋಸ್ಟ್ ವಿರುದ್ಧ ಬಿಜೆಪಿಯ ಐಟಿ ಸೆಲ್ ದೂರು ನೀಡಿದ ಹಿನ್ನೆಲೆಯಲ್ಲಿ ರವಿವಾರ ಮುಂಜಾನೆ 4 ಗಂಟೆಯ ಸುಮಾರಿಗೆ ದೋತೆಯನ್ನು ಅವರ ನಿವಾಸದಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿಧಿ 354 1(4) (ಲೈಂಗಿಕ ಕಿರುಕುಳ) ಮತ್ತು 505(2)ನೇ ವಿಧಿ (ಜನರನ್ನು ಪರಸ್ಪರ ಎತ್ತಿಕಟ್ಟಲು ಸಾರ್ವಜನಿಕವಾಗಿ ಅವಹೇಳನ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ 67ನೇ ವಿಧಿ (ಅಶ್ಲೀಲ ಚಿತ್ರಗಳ ರವಾನೆ)ಯಡಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.