ಎಟಿಎಂನಿಂದ ನಿಮ್ಮಿಷ್ಟದಂತೆ ಇನ್ನು ಹಣ ಪಡೆಯಲು ಸಾಧ್ಯವಿಲ್ಲ...!

ಹೊಸದಿಲ್ಲಿ: ಎಟಿಎಂ ವಂಚನೆ ತಡೆಯಲು ದೆಹಲಿ ರಾಜ್ಯಮಟ್ಟದ ಬ್ಯಾಂಕರ್ಗಳ ಸಮಿತಿ (ಎಸ್ಎಲ್ಬಿಸಿ) ಹಲವು ಮಾರ್ಗೋಪಾಯಗಳನ್ನು ಸಲಹೆ ಮಾಡಿದ್ದು, ಒಂದು ಬಾರಿ ಎಟಿಎಂನಿಂದ ಹಣ ಪಡೆದು ಮತ್ತೊಂದು ಬಾರಿ ಹಣ ಪಡೆಯಲು ಕನಿಷ್ಠ ಆರರಿಂದ ಹನ್ನೆರಡು ಗಂಟೆ ಅಂತರ ನಿಗದಿಪಡಿಸುವುದು ಇವುಗಳಲ್ಲಿ ಪ್ರಮುಖ.
"ಹಲವು ವಂಚನೆಗಳು ರಾತ್ರಿ ಅಂದರೆ ಮಧ್ಯರಾತ್ರಿಯಿಂದ ಮುಂಜಾನೆವರೆಗೆ ನಡೆಯುತ್ತವೆ. ನಿರ್ದಿಷ್ಟ ಅವಧಿಯಲ್ಲಿ ವಹಿವಾಟು ಸ್ಥಗಿತಗೊಳಿಸುವುದು ವಂಚನೆ ತಡೆಯಲು ನೆರವಾಗಬಹುದು" ಎಂದು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ನ ಎಂಡಿ ಹಾಗೂ ಸಿಇಒ, ಎಸ್ಎಲ್ಬಿಸಿ ಸಂಯೋಜಕ ಮುಖೇಶ್ ಕುಮಾರ್ ಜೈನ್ ಅಭಿಪ್ರಾಯಪಟ್ಟಿದ್ದಾರೆ.
ಹದಿನೆಂಟು ಮಂದಿ ಉನ್ನತ ಬ್ಯಾಂಕ್ ಅಧಿಕಾರಿಗಳ ಸಮಿತಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಈ ಪ್ರಸ್ತಾವನೆ ಸ್ವೀಕರಿಸಿದಲ್ಲಿ, ನಿರ್ದಿಷ್ಟ ಅವಧಿಯಲ್ಲಿ ಹಣ ಪಡೆಯಲು ಸಾಧ್ಯವಾಗುವುದಿಲ್ಲ.
2018-19ರ ಅವಧಿಯಲ್ಲಿ ದೆಹಲಿಯಲ್ಲಿ 179 ಎಟಿಎಂ ವಂಚನೆ ಪ್ರಕರಣಗಳು ವರದಿಯಾಗಿದ್ದು, ಮಹಾರಾಷ್ಟ್ರ (233) ಹೊರತುಪಡಿಸಿದರೆ ಇದು ದೇಶದಲ್ಲೇ ಅತ್ಯಧಿಕ. ಇತ್ತೀಚಿನ ತಿಂಗಳುಗಳಲ್ಲಿ ಕಾರ್ಡ್ ಕ್ಲೋನಿಂಗ್ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ದೊಡ್ಡಸಂಖ್ಯೆಯಲ್ಲಿ ವಿದೇಶಿಯರೂ ಈ ದಂಧೆಯ ಹಿಂದಿದ್ದಾರೆ. 2018-19ರಲ್ಲಿ ದೇಶಾದ್ಯಂತ 980 ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದು ಹಿಂದಿನ ವರ್ಷ (911)ಕ್ಕೆ ಹೋಲಿಸಿದರೆ ಅಧಿಕ.
ಬ್ಯಾಂಕ್ ಅಧಿಕಾರಿಗಳು ಇತರ ಹಲವು ಮಾರ್ಗೋಪಾಯಗಳನ್ನು ಶಿಫಾರಸ್ಸು ಮಾಡಿದ್ದು, ಒಂದು ಬಾರಿಯ ಪಾಸ್ವರ್ಡ್ (ಒಟಿಪಿ) ಸಂಪರ್ಕಿಸಿ ಹಣ ಪಡೆಯಲು ಅವಕಾಶ ನೀಡುವುದು ಇದರಲ್ಲಿ ಸೇರಿದೆ. ಇದರಿಂದಾಗಿ ಅನಧಿಕೃತ ಹಣ ಪಡೆಯುವ ಪ್ರಯತ್ನ ಮಾಡಿದರೆ ಖಾತೆದಾರರಿಗೆ ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ. ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಸಿಕೊಂಡು ಆನ್ಲೈನ್ ವಹಿವಾಟು ನಡೆಸುವ ವ್ಯವಸ್ಥೆಯಂತೆ ಇದು ಇರುತ್ತದೆ ಎಂದು ಜೈನ್ ವಿವರಿಸಿದ್ದಾರೆ. ದ್ವಿಮುಖ ಸಂವಹನಕ್ಕಾಗಿ ಎಟಿಎಂಗೆ ಸಂಬಂಧಿಸಿ ಕೇಂದ್ರೀಯ ಕಣ್ಗಾವಲು ವ್ಯವಸ್ಥೆ ಬಗ್ಗೆಯೂ ಸಲಹೆ ನೀಡಲಾಗಿದೆ ಎಂದು ಹೇಳಿದ್ದಾರೆ.