ಜಮ್ಮುವಿನಲ್ಲಿ ದೊಗ್ರ ಸದರ್ ಸಭಾ ಮುಖ್ಯಸ್ಥನ ಬಂಧನ

ಜಮ್ಮು,ಆ.27: ದೊಗ್ರ ಸದರ್ ಸಭಾ ಅಧ್ಯಕ್ಷ ಮತ್ತು ಮಾಜಿ ಸಚಿವ ಗುಲ್ಚೈನ್ ಸಿಂಗ್ ಚರಕ್ ಅವರನ್ನು ಜಮ್ಮುವಿನಲ್ಲಿ ಮಂಗಳವಾರ ಅವರು ನಡೆಸಲುದ್ದೇಶಿಸಿದ್ದ ಪತ್ರಿಕಾಗೋಷ್ಟಿಗೂ ಮೊದಲೇ ಬಂಧಿಸಲಾಗಿದೆ ಎಂದು ಅವರ ಪುತ್ರ ಗಂಭೀರ್ ದೇವ್ ಸಿಂಗ್ ಚರಕ್ ತಿಳಿಸಿದ್ದಾರೆ.
ಚರಕ್ ಅವರು ನಗರದ ದೊಗ್ರ ಭವನದಲ್ಲಿರುವ ಪಕ್ಷದ ಮುಖ್ಯ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಲು ಆಗಮಿಸಿದ ಸಂದರ್ಭದಲ್ಲಿ ಪೊಲೀಸರು ಯಾವುದೇ ಕಾರಣ ನೀಡದೆ ಅವರನ್ನು ಬಂಧಿಸಿದ್ದಾರೆ ಎಂದು ಗಂಭೀರ್ ಆರೋಪಿಸಿದ್ದಾರೆ.
ರಾಜ್ಯದ ಮರುಸಂಘಟನೆಗೆ ಸಂಬಂಧಪಟ್ಟಂತೆ ಜಮ್ಮುವಿನ ಜನರ ಹಿತಾಸಕ್ತಿಯನ್ನು ರಕ್ಷಿಸಲು ಕೆಲವೊಂದು ಸಲಹೆ ನೀಡುವ ಉದ್ದೇಶದಿಂದ ದೊಗ್ರ ಸದರ್ ಸಭಾ ಈ ಪತ್ರಿಕಾಗೋಷ್ಟಿಯನ್ನು ಆಯೋಜಿಸಿತ್ತು ಎಂದು ಪಕ್ಷದ ಯುವ ಮೋರ್ಚದ ಮುಖ್ಯಸ್ಥರಾಗಿರುವ ಗಂಭೀರ್ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವುದನ್ನು ನಮ್ಮ ಪಕ್ಷ ಸಂಪೂರ್ಣವಾಗಿ ಬೆಂಬಲಿಸಿರುವುದರಿಂದ ಚರಕ್ ಅವರ ಬಂಧನಕ್ಕೆ ಯಾವ ಸಮರ್ಥನೆಯೂ ಇಲ್ಲ. ಈ ಬಂಧನ ಪ್ರಜಾಪ್ರಭುತ್ವದ ಕೊಲೆಗೆ ಸಮ ಎಂದು ಗಂಭೀರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಣಿವೆ ರಾಜ್ಯದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಜಮ್ಮುವಿನಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಜಿ.ಎ ಮಿರ್, ದೊಗ್ರ ಸ್ವಾಭಿಮಾನ ಸಂಘಟನೆಯ ಸ್ಥಾಪಕ ಚೌದರಿ ಲಾಲ್ ಸಿಂಗ್ ಮತ್ತು ನ್ಯಾಶನಲ್ ಕಾನ್ಫರೆನ್ಸ್ನ ಪ್ರಾಂತೀಯ ಅಧ್ಯಕ್ಷ ದೇವೇಂದರ್ ಸಿಂಗ್ ರಾಣಾ ಅವರನ್ನು ಗೃಹ ಬಂಧನದಲ್ಲಿರಿಸಲಾಗಿದೆ.