ಪಿ.ಚಿದಂಬರಂ ಬಂಧನ ವಿರುದ್ಧ ಮಧ್ಯಂತರ ತಡೆಯಾಜ್ಞೆ ವಿಸ್ತರಣೆ
ಐಎನ್ಎಕ್ಸ್ ಮೀಡಿಯಾ ಪ್ರಕರಣ

ಹೊಸದಿಲ್ಲಿ,ಆ.27: ಐಎನ್ಎಕ್ಸ್ ಮೀಡಿಯಾ ಅಕ್ರಮ ಹಣ ವಹಿವಾಟು ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಈ.ಡಿ.)ದಿಂದ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ಬಂಧನದ ವಿರುದ್ಧ ತಾನು ನೀಡಿರುವ ಮಧ್ಯಂತರ ತಡೆಯಾಜ್ಞೆಯನ್ನು ಸರ್ವೋಚ್ಚ ನ್ಯಾಯಾಲಯವು ಬುಧವಾರದವರೆಗೆ ವಿಸ್ತರಿಸಿದೆ. ಆದರೆ ಚಿದಂಬರಂ ಅವರು ಕನಿಷ್ಠ ಶುಕ್ರವಾರದವರೆಗೂ ಸಿಬಿಐ ಕಸ್ಟಡಿಯಲ್ಲಿ ಇರಲಿದ್ದಾರೆ.
ಮಂಗಳವಾರ ವಿಚಾರಣೆಯ ಸಂದರ್ಭದಲ್ಲಿ ಚಿದಂಬರಂ ಪರ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರು, ಪ್ರಕರಣದಲ್ಲಿ ಡಿ.19,ಜ.1 ಮತ್ತು ಜ.21ರಂದು ನಡೆಸಲಾದ ಅವರ ವಿಚಾರಣೆಯ ಲಿಪ್ಯಂತರಗಳನ್ನು ಹಾಜರು ಪಡಿಸಲು ಈ.ಡಿ.ಗೆ ನಿರ್ದೇಶ ನೀಡುವಂತೆ ನ್ಯಾಯಮೂರ್ತಿಗಳಾದ ಆರ್.ಭಾನುಮತಿ ಮತ್ತು ಎ.ಎಸ್.ಬೋಪಣ್ಣ ಅವರ ಪೀಠವನ್ನು ಆಗ್ರಹಿಸಿದರು. ಸಿಬಿಐ ಈ ದಾಖಲೆಗಳನ್ನು ಯಾದೃಚ್ಛಿಕವಾಗಿ ನ್ಯಾಯಾಲಯದಲ್ಲಿ ಹಾಜರು ಪಡಿಸುವಂತಿಲ್ಲ ಮತ್ತು ದಾಖಲೆಗಳನ್ನು ಮುಚ್ಚಿಟ್ಟಿಕೊಂಡು ಆರೋಪಿಯ ಕಸ್ಟಡಿಯನ್ನು ಕೇಳುವಂತಿಲ್ಲ. ವಿಚಾರಣೆ ವೇಳೆ ಚಿದಂಬರಂ ಪ್ರಶ್ನೆಗಳಿಂದ ನುಣುಚಿಕೊಂಡಿದ್ದರೇ ಎನ್ನುವುದನ್ನು ಈ ಲಿಪ್ಯಂತರಗಳು ಬಹಿರಂಗಗೊಳಿಸುತ್ತವೆ ಎಂದು ಅವರು ವಾದಿಸಿದರು. ಬಳಿಕ ಈ.ಡಿ.ಮುಚ್ಚಿದ ಲಕೋಟೆಯಲ್ಲಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿತು.
ಚಿದಂಬರಂ ಪರ ಇನ್ನೋರ್ವ ಹಿರಿಯ ನ್ಯಾಯವಾದಿ ಅಭಿಷೇಕ ಮನು ಸಿಂಘ್ವಿ ಅವರು,ಅಕ್ರಮ ಹಣ ವಹಿವಾಟು ತಡೆ ಕಾಯ್ದೆಯನ್ನು 2009ರಲ್ಲಿ ತಿದ್ದುಪಡಿಗೊಳಿಸಲಾಗಿದೆ ಮತ್ತು ಪ್ರಕರಣದಲ್ಲಿಯ ಆರೋಪಗಳು 2007-2008ರ ಅವಧಿಗೆ ಸಂಬಂಧಿಸಿವೆ. ಆ ಸಮಯದಲ್ಲಿ ಅಸ್ತಿತ್ವದಲ್ಲಿರದಿದ್ದ ಆರೋಪಗಳನ್ನು ತನ್ನ ಕಕ್ಷಿದಾರರ ಮೇಲೆ ಹೊರಿಸುವ ಮೂಲಕ ಈ.ಡಿ.ಅವರನ್ನು ಪ್ರಕರಣದ ಕಿಂಗ್ಪಿನ್ ಆಗಿಸಲು ಪ್ರಯತ್ನಿಸುತ್ತಿದೆ ಎಂದು ವಾದಿಸಿದರು.
ತನ್ನ ಕಕ್ಷಿದಾರರು ವಿಚಾರಣೆಗೆ ಲಭ್ಯವಿರುವವರೆಗೆ ತನಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ,ತನಿಖಾ ಸಂಸ್ಥೆಗೆ ಬೇಕಾಗಿರುವ ಉತ್ತರಗಳನ್ನು ನೀಡಲು ಅವರು ಬದ್ಧರಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಈ.ಡಿ.ಪರ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು,‘ನಮಗೆ ಅವರ ಕಸ್ಟಡಿ ವಿಚಾರಣೆ ಅಗತ್ಯವಿದೆಯೇ ಹೊರತು ಕಸ್ಟಡಿ ತಪ್ಪೊಪ್ಪಿಗೆಯಲ್ಲ ’ ಎಂದು ಹೇಳಿದರು.