ಅಮಿತ್ ಶಾ ಪುತ್ರ ದಾಖಲಿಸಿದ ಮಾನನಷ್ಟ ಮೊಕದ್ದಮೆ ಮೇಲ್ಮನವಿ ಹಿಂದೆಗೆಯಲು ‘ದಿ ವೈರ್’ಗೆ ಸುಪ್ರೀಂ ಅನುಮತಿ

ಹೊಸದಿಲ್ಲಿ, ಆ. 27: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ದಾಖಲಿಸಿದ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ ಉಚ್ಚ ನ್ಯಾಯಾಲಯ ನೀಡಿದ ಆದೇಶ ಪ್ರಶ್ನಿಸಿ ಸುದ್ದಿ ತಾಣ ‘ದಿ ವೈರ್’ ಹಾಗೂ ಪತ್ರಕರ್ತೆ ರೋಹಿಣಿ ಸಿಂಗ್ ಸಲ್ಲಿಸಿದ ಮೇಲ್ಮನವಿ ಹಿಂದೆ ತೆಗೆಯಲು ಸರ್ವೋಚ್ಚ ನ್ಯಾಯಾಲಯ ಗುರುವಾರ ಅವಕಾಶ ನೀಡಿದೆ.
ಅವರ ವಿರುದ್ಧ ವಿಚಾರಣೆ ಸಂಬಂಧಿತ ನ್ಯಾಯಾಲಯದಲ್ಲಿ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಕಳೆದ ಒಂದೂವರೆ ವರ್ಷದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಮನವಿಯನ್ನು ಹಿಂದೆ ತೆಗೆಯಲು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠ ಅವಕಾಶ ನೀಡಿತು. ಅಲ್ಲದೆ, ದೇಶದಲ್ಲಿ ಅನುಸರಿಸುತ್ತಿರುವ ಪತ್ರಿಕೋದ್ಯಮದ ರೀತಿಗೆ ಆಕ್ರೋಶ ವ್ಯಕ್ತಪಡಿಸಿತು.
ವಿವರಣೆ ಕೋರಿ ವ್ಯಕ್ತಿಗೆ ನೋಟಿಸು ಕಳುಹಿಸುವುದು ಈಗ ಫ್ಯಾಶನ್ ಆಗುತ್ತಿದೆ. ಅವರು ಉತ್ತರಿಸುವ ಮೊದಲೇ ಲೇಖನಗಳನ್ನು ಐದರಿಂದ ಆರು ಗಂಟೆಗಳಲ್ಲಿ ಪ್ರಕಟಿಸಲಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಎಂ.ಆರ್. ಶಾಹ್ ಹಾಗೂ ಬಿ.ಆರ್. ಗವಾಯಿ ಅವರನ್ನು ಒಳಗೊಂಡ ಪೀಠ ಹೇಳಿದೆ. ತಾವು ಸಲ್ಲಿಸಿದ ಮನವಿಯನ್ನು ಹಿಂದೆ ತೆಗೆಯಲಾಗುವುದು ಎಂದು ಸುದ್ದಿ ತಾಣ ‘ದಿ ವೈರ್’ ಹಾಗೂ ಪತ್ರಕರ್ತೆ ರೋಹಣಿ ಸಿಂಗ್ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಮನವಿ ಮಾಡಿದ ಸಂದರ್ಭ ಸರ್ವೋಚ್ಚ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.