ಶಾ ಫೈಸಲ್ ಗುಂಪನ್ನು ಪ್ರಚೋದಿಸುತ್ತಿದ್ದರು: ಜಮ್ಮು ಕಾಶ್ಮೀರ ಆಡಳಿತ

ಹೊಸದಿಲ್ಲಿ,ಆ.27: ಐಎಎಸ್ ಟಾಪರ್ ಶಾ ಫೈಸಲ್ ಶ್ರೀನಗರ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಗುಂಪನ್ನು ಪ್ರಚೋದಿಸುತ್ತಿದ್ದರು. ಹಾಗಾಗಿ ಅವರನ್ನು ಬಂಧಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಆಡಳಿತ ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ಮಂಗಳವಾರ ತಿಳಿಸಿದೆ.
ಕಣಿವೆ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಶಾ ಫೈಸಲ್ ಅವರ ಬಂಧನವಾದ ಹಿನ್ನೆಲೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇತ್ತೀಚೆಗಷ್ಟೇ ರಾಜಕೀಯ ಪ್ರವೇಶಿಸುವ ತನ್ನ ಇಂಗಿತ ವ್ಯಕ್ತಪಡಿಸಿದ್ದ ಶಾ ಫೈಸಲ್ ಅವರನ್ನು ಅವರು ಕಳೆದ ಬುಧವಾರ ವಿದೇಶಕ್ಕೆ ತೆರಳಲು ದಿಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಬಂಧಿಸಲಾಗಿತ್ತು. ನಂತರ ಅವರನ್ನು ಶ್ರೀನಗರಕ್ಕೆ ವಾಪಸ್ ಕಳುಹಿಸಿ ಅಲ್ಲಿ ಸಾರ್ವಜನಿಕ ಸುರಕ್ಷತೆ ಕಾಯ್ದೆಯಡಿ ಗೃಹ ಬಂಧನದಲ್ಲಿರಿಸಲಾಗಿದೆ.
ಶಾ ಫೈಸಲ್ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಶಿಕ್ಷಣ ಮುಂದುವರಿಸಲು ಅಮೆರಿಕಕ್ಕೆ ತೆರಳುತ್ತಿದ್ದುದನ್ನು ಪ್ರಶ್ನಿಸಿದ ಸರಕಾರ ಶಾ ಫೈಸಲ್ ಅವರು ಪ್ರವಾಸಿ ವೀಸದಲ್ಲಿ ಪ್ರಯಾಣಿಸುತ್ತಿದ್ದರೇ ಹೊರತು ವಿದ್ಯಾರ್ಥಿ ವೀಸದಲ್ಲಿ ಅಲ್ಲ ಎಂದು ತಿಳಿಸಿದೆ.
ದಿಲ್ಲಿಯಿಂದ ಶ್ರೀನಗರಕ್ಕೆ ತೆರಳುವ ಮಾರ್ಗ ಮಧ್ಯೆ ಶಾ ಫೈಸಲ್ ವಿಮಾನ ನಿಲ್ದಾಣದಲ್ಲಿದ್ದ ಗುಂಪನ್ನುದ್ದೇಶಿಸಿ ಮಾತನಾಡಲು ಆರಂಭಿಸಿದ್ದರು ಮತ್ತು ಅವರನ್ನು ಪ್ರಚೋದಿಸುತ್ತಿದ್ದರು. ಹಾಗಾಗಿ ಮ್ಯಾಜಿಸ್ಟ್ರೇಟ್ ಆದೇಶದಂತೆ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.