ಉಡುಪಿ ತಾಪಂ ಸಭೆಯಲ್ಲಿ ರಾ.ಹೆದ್ದಾರಿ ಸಮಸ್ಯೆಗಳ ಸರಮಾಲೆ
ವಾರದೊಳಗೆ ಜಿಲ್ಲಾಧಿಕಾರಿಗಳಿಂದ ಸ್ಥಳ ಪರಿಶೀಲನೆ: ಲಾಲಾಜಿ ಮೆಂಡನ್

ಉಡುಪಿ, ಆ.28: ರಾಷ್ಟ್ರೀಯ ಹೆದ್ದಾರಿ 66ರ ಹೊಂಡ, ಚರಂಡಿ, ದಾರಿ ದೀಪ, ಟೋಲ್, ಜಂಕ್ಷನ್ ಸೇರಿದಂತೆ ಹಲವು ಸಮಸ್ಯೆಗಳ ಮಹಾಪೂರವೇ ಬುಧವಾರ ನಡೆದ ಉಡುಪಿ ತಾಪಂ ಸಾಮಾನ್ಯ ಸಭೆಯಲ್ಲಿ ಕೇಳಿಬಂದಿದ್ದು, ಈ ಸಂಬಂಧ ವಾರದೊಳಗೆ ನೂತನ ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಕ್ರಮಕೈಗೊಳ್ಳಲಿದ್ದಾರೆ ಎಂದು ಸಭೆಯಲ್ಲಿ ಹಾಜರಿದ್ದ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ತಿಳಿಸಿದ್ದಾರೆ.
ತಾಪಂ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆ ಯಲ್ಲಿ ಹಲವು ಮಂದಿ ಸದಸ್ಯರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿನ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳನ್ನು ಹೆದ್ದಾರಿ ಅಧಿಕಾರಿಗಳ ಮುಂದಿಟ್ಟರು. ಸದಸ್ಯ ದಿನೇಶ್ ಕೋಟ್ಯಾನ್ ಮಾತನಾಡಿ, ಪಡುಬಿದ್ರೆಯಲ್ಲಿ ಈವರೆಗೂ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿಲ್ಲ. ಸರ್ವಿಸ್ ರಸ್ತೆ ಆಗಿಲ್ಲ. ಇದೆಲ್ಲ ಸಂಪೂರ್ಣಗೊಳ್ಳಲು ಇನ್ನು ಎಷ್ಟು ವರ್ಷ ಬೇಕಾಗಬಹುದು ಎಂದು ಟೀಕಿಸಿದರು.
ಮಾಜಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಮಾತನಾಡಿ, ಸಂತೆಕಟ್ಟೆ ಸೇತುವೆ ಬಳಿ ಹೊಂಡಗಳು ತುಂಬಿದ್ದು, ಇದರಿಂದ ವಾಹನ ಸವಾರರು ತೀರಾ ತೊಂದರೆ ಅನುಭವಿಸುತ್ತಿದ್ದಾರೆ. ಅದೇ ರೀತಿ ದಾರಿದೀಪದ ವ್ಯವಸ್ಥೆ ಇಲ್ಲದೆ ಇಡೀ ಪರಿಸರ ಕತ್ತಲಿನಿಂದ ಕೂಡಿದೆ. ಇಲ್ಲಿಗೆ ದಾರಿದೀಪಗಳ ಅತಿಅಗತ್ಯವಿದೆ ಎಂದರು.
ಈ ಬಗ್ಗೆ ತಾಪಂನಲ್ಲಿ ನಿರ್ಣಯ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಪ್ರಸ್ತಾವನೆ ಕಳುಹಿಸಿದರೆ ಅಗತ್ಯ ಇರುವ ಕಡೆ ದಾರಿದೀಪ ಅಳವಡಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ರಾ.ಹೆ. ಗುತ್ತಿಗೆ ಕಂಪೆನಿ ನವಯುಗದ ಶಿವಪ್ರಸಾದ್ ತಿಳಿಸಿದರು.
ಪಡುಬಿದ್ರಿ ಜಂಕ್ಷನ್ನಲ್ಲಿ ಸಿಗ್ನಲ್ ಅಳವಡಿಕೆ, ಪಡುಬಿದ್ರೆ ಬಸ್ ನಿಲ್ದಾಣಕ್ಕೆ ದೀಪದ ವ್ಯವಸ್ಥೆ, ಉಚ್ಚಿಲ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಮುಚ್ಚಿರುವ ಚರಂಡಿ ಮರು ನಿರ್ಮಾಣ, ಹೆದ್ದಾರಿ ವ್ಯಾಪ್ತಿಯಲ್ಲಿರುವ ಪಂಚಾಯತ್ ರಸ್ತೆಗೆ ಅನುದಾನ, ಕಟಪಾಡಿ ಜಂಕ್ಷನ್ನಲ್ಲಿ ಟ್ರಾಪಿಕ್ ಸಮಸ್ಯೆ ಸೇರಿದಂತೆ ವಿವಿಧ ವಿಚಾರಗಳನ್ನು ಸದಸ್ಯರುಗಳು ಸಭೆಯಲ್ಲಿ ಪ್ರಸ್ತಾಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಲಾಲಾಜಿ ಆರ್.ಮೆಂಡನ್, ಈ ಸಂಬಂಧ ಈಗಾಗಲೇ ಹೊಸ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ವಿಷಯ ತಿಳಿಸ ಲಾಗಿದೆ. ಅವರು ವಾರದೊಳಗೆ ಸಮಸ್ಯೆ ಇರುವ ಸ್ಥಳಗಳಿಗೆ ಭೇಟಿ ನೀಡಿ ಪರಿ ಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ. ಮುಂದೆ ಇದಕ್ಕೆ ಪರಿಹಾರ ಕ್ರಮ ತೆಗೆದು ಕೊಳ್ಳಲಾಗುವುದು ಎಂದರು.
ಪಿಂಚಣಿ ಬಾಕಿ ಪಾವತಿಸಿ: ಡಾ.ಸುನೀತಾ ಶೆಟ್ಟಿ ಮಾತನಾಡಿ, ಪಿಂಚಣಿ ಪಾವತಿ ಬಗ್ಗೆ ಇನ್ನು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ತಹಶೀಲ್ದಾರ್ ಗಳು ಗಮನ ಹರಿಸಿ ಫಲಾನುಭವಿಗಳಿಗೆ ಹಣ ಬರುವಂತೆ ಕ್ರಮ ಕೈಗೊಳ್ಳ ಬೇಕು ಎಂದರು. ಇವರೊಂದಿಗೆ ಮೈಕಲ್ ರಮೇಶ್ ಡಿಸೋಜ, ಸುಧೀರ್ ಕುಮಾರ್ ಧ್ವನಿಗೂಡಿಸಿದರು.
ಅಂಬಲಪಾಡಿ ಗ್ರಾಪಂ ವ್ಯಾಪ್ತಿಯ ವಿದ್ಯುತ್ ಕಂಬಗಳಲ್ಲಿರುವ ಕಂಟ್ರೋಲ್ ಬಾಕ್ಸ್ಗಳು ತುಕ್ಕು ಹಿಡಿದಿದ್ದು, ಇದನ್ನು ಕೂಡಲೇ ಬದಲಾಯಿಸಬೇಕು. ಮಳೆ ಯಿಂದಾಗಿ ಧರೆಗೆ ಉರುಳಿದ ಕಂಬಗಳನ್ನು ತೆರವುಗೊಳಿಸಿ, ಹೊಸ ಕಂಬ ಹಾಕಿದ ಸಂದರ್ಭದಲ್ಲಿ ದಾರಿದೀಪವನ್ನು ಕೂಡ ಅಳವಡಿಸಬೇಕು ಎಂದು ರಾಜೇಂದ್ರ ಪಂದುಬೆಟ್ಟು ಒತ್ತಾಯಿಸಿದರು.
ಪಾದೂರು ಪೈಪ್ಲೈನ್ ಕಾಮಗಾರಿ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದರೂ ಈವರೆಗೆ ಉತ್ತರ ಬಂದಿಲ್ಲ. ಕಳೆದ ಎರಡು ವರ್ಷಗಳಿಂದ ಅಧಿಕಾರಿಗಳು ಇದನ್ನೇ ಹೇಳುತ್ತಿದ್ದಾರೆ. ಉತ್ತರ ಬಾರ ದಿದ್ದರೆ ಇದರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಮಜೂರು ಗ್ರಾಪಂ ಅಧ್ಯಕ್ಷ ಸಂದೀಪ್ ರಾವ್ ಸಭೆಗೆ ತಿಳಿಸಿದರು.
ಪಾದೂರು ತೈಲಾಗಾರದ ವಿಸ್ತರಣೆ ಬಗ್ಗೆ ಏನಾದರೂ ಮಾಹಿತಿ ಬಂದಿದೆಯೇ ಎಂಬ ಸಂದೀಪ್ ರಾವ್ ಪ್ರಶ್ನೆಗೆ ಈವರೆಗೆ ಯಾವುದೇ ಪತ್ರ ನಮಗೆ ಬಂದಿಲ್ಲ ಎಂದು ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಹಾಗೂ ಕಾಪು ತಹಶೀಲ್ದಾರ್ ಮುಹಮ್ಮದ್ ಇಸಾಕ್ ತಿಳಿಸಿದರು.
ಯೋಜನಾ ಪ್ರಾಧಿಕಾರದಿಂದ ಮಜೂರು ಗ್ರಾಮವನ್ನು ಹೊರತು ಪಡಿಸ ಬೇಕು ಎಂದು ಸದಸ್ಯೆ ಶಶಿಪ್ರಭಾ ಶೆಟ್ಟಿ ಒತ್ತಾಯಿಸಿದರು. ನಗರ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಮಾಡಿದರೆ ಮಜೂರು ಗ್ರಾಮ ವನ್ನು ಕೈಬಿಡಬಹುದಾಗಿದೆ ಎಂದು ಸರಕಾರ ತಿಳಿಸಿದೆ. ಈ ಬಗ್ಗೆ ಪ್ರಯತ್ನ ಮಾಡಬೇಕು ಎಂದು ಅಧ್ಯಕ್ಷ ಸಂದೀಪ್ ರಾವ್ ಶಾಸಕರನ್ನು ಒತ್ತಾಯಿಸಿದರು.
ಈ ಸಂದರ್ಭ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಶರತ್ ಕುಮಾರ್ ಅವರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಅಲ್ಲದೇ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ವರ್ಗಾವಣೆಗೊಂಡ ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜು ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್, ಉಪಾಧ್ಯಕ್ಷ ಭುಜಂಗ ಶೆಟ್ಟಿ, ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೊರಯ್ಯ ಉಪಸ್ಥಿತರಿದ್ದರು.
ಎಂಟೇ ತಿಂಗಳಲ್ಲಿ ಕೊಚ್ಚಿಹೋದ 1 ಕೋಟಿ ವೆಚ್ಚದ ರಸ್ತೆ!
ಕಟಪಾಡಿ -ಮಟ್ಟು ಮೀನುಗಾರಿಕಾ ರಸ್ತೆಯನ್ನು ಒಂದು ಕೋಟಿ ರೂ. ವೆಚ್ಚ ದಲ್ಲಿ ಅಭಿವೃದ್ಧಿ ಪಡಿಸಿದ್ದು, ಕೇವಲ ಎಂಟೇ ತಿಂಗಳಲ್ಲಿ ಈ ರಸ್ತೆ ಡಾಮರು ಸಂಪೂರ್ಣ ಕಿತ್ತು ಹೋಗಿದೆ. ಈ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿ ಸುತ್ತಿದ್ದಾರೆ ಎಂದು ಸದಸ್ಯ ರಾಜೇಶ್ ಅಂಬಾಡಿ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಲಾಲಾಜಿ ಆರ್.ಮೆಂಡನ್, ಈ ವಿಚಾರ ನನ್ನ ಗಮನಕ್ಕೆ ಬಂದಿದ್ದು, ಇಲ್ಲಿನ ಮಳೆಗೆ ಯಾವುದೇ ಡಾಮರು ನಿಲ್ಲುವುದಿಲ್ಲ. ಇದನ್ನು ಈಗಾಗಲೇ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರ ಮಾಡ ಲಾಗಿದೆ. ಇದಕ್ಕೆ ತೇಪೆ ಹಚ್ಚುವ ಕಾರ್ಯವನ್ನು ಮಾಡಲಾಗುವುದು ಎಂದರು.
ಮಟ್ಟುವಿನಲ್ಲಿ ಸೇತುವೆ ನಿರ್ಮಾಣಕ್ಕೆ ನಾಲ್ಕು ಕೋಟಿ ರೂ. ಮಂಜೂ ರಾಗಿದ್ದು, ಈ ಹಿನ್ನೆಲೆಯಲ್ಲಿ ಒಂದು ವರ್ಷಗಳಿಂದ ಹೊಳೆಗೆ ಮಣ್ಣು ಹಾಕ ಲಾಗಿದೆ. ಆದರೆ ಕಾಮಗಾರಿ ಇನ್ನೂ ಆರಂಭಿಸಿಲ್ಲ. ಈಗ ಬಿಜೆಪಿ ಸಂಸದರು, ಶಾಸಕರು, ಜಿಪಂ, ತಾಪಂ ಸದಸ್ಯರೇ ಇರುವಾಗ ಈ ಕಾಮಗಾರಿ ನಡೆಸಲು ಸಮಸ್ಯೆ ಏನು ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ ಎಂದು ರಾಜೇಶ್ ಅಂಬಾಡಿ ಹೇಳಿದರು.







