ಸಮೀಕ್ಷೆ: ಮುಸ್ಲಿಮರಲ್ಲಿ ಅಪರಾಧ ಮನೋಭಾವ ಸ್ವಾಭಾವಿಕ ಎಂದ ಶೇ.50ರಷ್ಟು ಪೊಲೀಸರು !
ಶೇ.35 ಆರಕ್ಷಕರ ಪ್ರಕಾರ ‘ಗುಂಪು ಥಳಿತ’ ತಪ್ಪೇ ಅಲ್ಲ !

ಹೊಸದಿಲ್ಲಿ, ಆ.28: ಮುಸ್ಲಿಮರಲ್ಲಿ ಸ್ವಾಭಾವಿಕವಾಗಿ ಅಪರಾಧ ಮನೋಭಾವವಿದೆ ಎಂದು ಶೇ.50ರಷ್ಟು ಪೊಲೀಸರು ಭಾವಿಸಿರುವುದಾಗಿ ಸಮೀಕ್ಷೆಯ ವರದಿಯೊಂದು ತಿಳಿಸಿದೆ.
ದೇಶದಲ್ಲಿ ಪೊಲೀಸ್ ವ್ಯವಸ್ಥೆಯ ಸ್ಥಿತಿಗತಿಯ ಕುರಿತ 2019ರ ಸಮೀಕ್ಷಾ ವರದಿಯನ್ನು ಸುಪ್ರೀಂಕೋರ್ಟ್ನ ಮಾಜಿ ನ್ಯಾಯಾಧೀಶ ಜೆ ಚೆಲಮೇಶ್ವರ ಮಂಗಳವಾರ ಬಿಡುಗಡೆಗೊಳಿಸಿದರು. ‘ಕಾಮನ್ ಕಾಸ್’ ಎಂಬ ಹೆಸರಿನ ಸರಕಾರೇತರ ಸಂಸ್ಥೆ ಹಾಗೂ ‘ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್’ ಸಹಯೋಗದಲ್ಲಿ ಪೊಲೀಸ್ ಪರ್ಯಾಪ್ತತೆ ಮತ್ತು ಕೆಲಸದ ಸ್ಥಿತಿಯ ಬಗ್ಗೆ ನಡೆಸಿದ ಸಮೀಕ್ಷೆಯಲ್ಲಿ 21 ರಾಜ್ಯಗಳಲ್ಲಿ 12,000 ಪೊಲೀಸ್ ಸಿಬ್ಬಂದಿಗಳನ್ನು ಹಾಗೂ ಸಿಬ್ಬಂದಿಗಳ ಕುಟುಂಬದ 11,000 ಸದಸ್ಯರನ್ನು ಸಂದರ್ಶಿಸಲಾಗಿದೆ.
ಅಲ್ಲದೆ, ಗೋ ಹತ್ಯೆಯ ಪ್ರಕರಣದಲ್ಲಿ ಜನರ ಗುಂಪು ‘ದೋಷಿಗಳನ್ನು’ ಥಳಿಸಿ ಶಿಕ್ಷಿಸುವುದರಲ್ಲಿ ತಪ್ಪೇನಿಲ್ಲ ಎಂದು ಶೇ.35ರಷ್ಟು ಪೊಲೀಸರು ಹೇಳಿದ್ದಾರೆ. ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಜನರ ಗುಂಪು ಥಳಿಸುವುದು ಸ್ವಾಭಾವಿಕ ಎಂದು ಶೇ.43ರಷ್ಟು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಸಣ್ಣಪುಟ್ಟ ಅಪರಾಧಗಳಿಗೆ ನ್ಯಾಯಾಲಯದ ಬದಲು ಪೊಲೀಸರೇ ಸಣ್ಣ ಪ್ರಮಾಣದ ಶಿಕ್ಷೆ ವಿಧಿಸಬೇಕು ಎಂದು ಶೇ.37ರಷ್ಟು ಪೊಲೀಸರು ಅಭಿಪ್ರಾಯಪಟ್ಟಿದ್ದರೆ, ಪ್ರಭಾವೀ ವ್ಯಕ್ತಿಗಳಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ಸಂದರ್ಭ ರಾಜಕೀಯ ಒತ್ತಡ ಅನುಭವಿಸಿರುವುದಾಗಿ ಶೇ.72ರಷ್ಟು ಪೊಲೀಸರು ಹೇಳಿದ್ದಾರೆ.
ವರದಿ ಬಿಡುಗಡೆಗೊಳಿಸಿ ಮಾತನಾಡಿದ ನ್ಯಾ. ಚಲಮೇಶ್ವರ್, ಓರ್ವ ಬದ್ಧ ಅಧಿಕಾರಿಯಿಂದ ಬದಲಾವಣೆ ಸಾಧ್ಯ. ಆದರೆ ಅಂತಹ ಅಧಿಕಾರಿಗೆ ಕಾರ್ಯನಿರ್ವಹಿಸಲು ಬಿಡುತ್ತಾರೆಯೇ ಎಂಬುದೇ ಪ್ರಶ್ನೆಯಾಗಿದೆ ಎಂದು ಹೇಳಿದರು.