ಸಾಸಿವೆ ಕಳ್ಳತನ ಆರೋಪದಲ್ಲಿ ಯುವಕನ ಬಂಧನ: ಕಸ್ಟಡಿಯಲ್ಲಿ ಸಾವು

ಸೋನಭದ್ರಾ,ಆ.28: ಸಾಸಿವೆ ಕಳ್ಳತನದ ಆರೋಪದಲ್ಲಿ ಬಂಧಿಸಲಾಗಿದ್ದ ಯುವಕನೋರ್ವ ಅನಾರೋಗ್ಯದಿಂದ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿವಂ (25) ಎಂಬಾತನನ್ನು ಸೋಮವಾರ ಪನ್ನುಗಂಜ್ ಪೊಲೀಸರು ಬಂಧಿಸಿದ್ದರು. ಮಂಗಳವಾರ ಸಂಜೆ ಆತ ಅಸ್ವಸ್ಥಗೊಂಡಿದ್ದ ಮತ್ತು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ ಎಂದರು.
ಘಟನೆಗೆ ಸಂಬಂಧಿಸಿದಂತೆ ಪನ್ನುಗಂಜ್ ಠಾಣಾಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಎಎಸ್ಪಿ ಒ.ಪಿ.ಸಿಂಗ್ ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ಪೋಲೀಸ್ ಠಾಣೆಯಲ್ಲಿನ ಚಿತ್ರಹಿಂಸೆಯಿಂದಾಗಿ ಶಿವಂ ಮೃತಪಟ್ಟಿದ್ದಾನೆ. ಮಂಗಳವಾರ ಸಂಜೆ ಐದು ಗಂಟೆಯ ಸುಮಾರಿಗೆ ಆತನನ್ನು ಭೇಟಿಯಾದಾಗ ಚೆನ್ನಾಗಿಯೇ ಇದ್ದ. ಆದರೆ ಏಳು ಗಂಟೆಯ ಸುಮಾರಿಗ ಆತ ಅಸ್ವಸ್ಥನಾಗಿದ್ದಾನೆ ಎಂಬ ವಿಷಯ ಗ್ರಾಮ ಪ್ರಧಾನರ ಮೂಲಕ ಗೊತ್ತಾಗಿತ್ತು. ಠಾಣಾಧಿಕಾರಿಗಳು ಆತನ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿರುವ ಮೃತನ ತಂದೆ ಉಮಾಪತಿ ಶುಕ್ಲಾ ಅವರು,ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.