ಕಾಶ್ಮೀರದಲ್ಲಿ ಭಿನ್ನಾಭಿಪ್ರಾಯದ ಧ್ವನಿಗಳನ್ನು ಹತ್ತಿಕ್ಕಲು ಸರಕಾರದಿಂದ ವಿವೇಚನಾರಹಿತ ಬಲ ಬಳಕೆ:ಮಮತಾ

ಕೋಲ್ಕತಾ,ಆ.28: ಕಾಶ್ಮೀರ ಕಣಿವೆಯಲ್ಲಿ ಭಿನ್ನಾಭಿಪ್ರಾಯದ ಧ್ವನಿಗಳನ್ನು ಅಡಗಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ವಿವೇಚನಾರಹಿತ ಬಲವನ್ನು ಬಳಸುತ್ತಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ಇಲ್ಲಿ ಆರೋಪಿಸಿದರು.
ವಿದ್ಯಾರ್ಥಿ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು,ಸರಕಾರದ ಕೈಗೊಂಬೆಗಳಂತೆ ವರ್ತಿಸುತ್ತಿರುವ,ಯಾವುದೇ ಉತ್ತರದಾಯಿತ್ವ ಇಲ್ಲದ ನಿವೃತ್ತ ಅಧಿಕಾರಿಗಳು ದೇಶದ ಪ್ರಮುಖ ಸಂಸ್ಥೆಗಳ ಮುಖ್ಯಸ್ಥರಾಗಿದ್ದಾರೆ ಎಂದೂ ಹೇಳಿದರು.
ಸರಕಾರದ ವಿರುದ್ಧ ಧ್ವನಿಯೆತ್ತಿದ್ದಕ್ಕಾಗಿ ತನ್ನನ್ನು ಬಂಧಿಸುವಂತೆ ಕೇಂದ್ರಕ್ಕೆ ಸವಾಲು ಹಾಕಿದ ಅವರು,ತಾನು ಬಿಜೆಪಿಯ ಎದುರು ಬಗ್ಗುವುದಿಲ್ಲ ಎಂದು ಒತ್ತಿ ಹೇಳಿದರು.
ದೇಶವು ಅಧ್ಯಕ್ಷೀಯ ರೂಪದ ಸರಕಾರದ ದಿಶೆಯಲ್ಲಿ ಸಾಗುತ್ತಿದೆ ಮತ್ತು ಪ್ರಜಾಪ್ರಭುತ್ವಕ್ಕೆ ಯಾವುದೇ ಅವಕಾಶವಿರುವುದಿಲ್ಲ ಎಂದು ಹೇಳಿದ ಅವರು,ಕೇಂದ್ರ ಸರಕಾರವು ಪ್ರತಿಪಕ್ಷ ನಾಯಕರನ್ನು ಬೆದರಿಸುತ್ತಿದೆ ಅಥವಾ ಹಣದಿಂದ ಅವರನ್ನು ಖರೀದಿಸುತ್ತಿದೆ. ನಾವು ಅದರ ನೀತಿಗಳನ್ನು ಮತ್ತು ವಿಭಜಕ ರಾಜಕೀಯವನ್ನು ವಿರೋಧಿಸುತ್ತಿರುವುದರಿಂದ ಅದೀಗ ಬಂಗಾಳದ ಹಿಂದೆ ಬಿದ್ದಿದೆ ಎಂದರು.