ನೆರೆ ಪೀಡಿತ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ ಪೂರೈಸಲು ಸರಕಾರದ ಆದೇಶ
![ನೆರೆ ಪೀಡಿತ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ ಪೂರೈಸಲು ಸರಕಾರದ ಆದೇಶ ನೆರೆ ಪೀಡಿತ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ ಪೂರೈಸಲು ಸರಕಾರದ ಆದೇಶ](https://www.varthabharati.in/sites/default/files/images/articles/2019/08/28/207433-1567012441.jpg)
ಬೆಂಗಳೂರು, ಆ.28: ರಾಜ್ಯದ ನೆರೆ ಪೀಡಿತ ಸಂತ್ರಸ್ತ ಜಿಲ್ಲೆಗಳಲ್ಲಿನ ಸರಕಾರಿ ಶಾಲೆಗಳ 1 ರಿಂದ 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ 2019-20ನೇ ಶೈಕ್ಷಣಿಕ ಸಾಲಿಗೆ ವಿದ್ಯಾವಿಕಾಸ ಯೋಜನೆಯಡಿ ಉಚಿತವಾಗಿ 87,903 ಜೊತೆ ಸಮವಸ್ತ್ರ ಬಟ್ಟೆಯನ್ನು ನಿಯಮಾನುಸಾರ ಪೂರೈಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸರಕಾರ ಅನುಮತಿ ನೀಡಿ ಆದೇಶಿಸಿದೆ.
ಈ ಸಮವಸ್ತ್ರಗಳನ್ನು 2019-20ನೇ ಸಾಲಿನ ಸಮವಸ್ತ್ರ ಸರಬರಾಜುದಾರರಾದ ಕೆಎಸ್ಟಿಐಡಿಸಿಯಿಂದ ಖರೀದಿಸಿ ವಿತರಿಸಲು ಕ್ರಮ ಕೈಗೊಳ್ಳಬೇಕು. ಈ ಉದ್ದೇಶಕ್ಕಾಗಿ ತಗಲುವ ವೆಚ್ಚವನ್ನು 2019-20ನೇ ಸಾಲಿನ ಆಯವ್ಯಯದ ವಿದ್ಯಾವಿಕಾಸ ಯೋಜನೆಯಡಿ ಉಳಿಕೆಯಾಗಬಹುದಾದ ಅನುದಾನದಿಂದ ಭರಿಸಬೇಕು.
ಸರಬರಾಜು ಮಾಡಲಾದ ಸಮವಸ್ತ್ರಗಳು ನಿಗದಿಪಡಿಸಿರುವ ವೈಶಿಷ್ಟತೆ ಹೊಂದಿರುವುದನ್ನು ಆಯುಕ್ತರು ಖಚಿತಪಡಿಸಿಕೊಳ್ಳುವುದು ಹಾಗೂ ಹೆಚ್ಚುವರಿ ಸಮವಸ್ತ್ರ ವಿತರಣೆಯ ಭೌತಿಕ ಪ್ರಗತಿಯ ಬಗ್ಗೆ ನಿಗಾ ವಹಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ(ಯೋಜನೆ) ಆದೇಶ ಹೊರಡಿಸಿದ್ದಾರೆ.