ನೆರೆ ಹಾವಳಿ: ರಸ್ತೆ-ಸೇತುವೆಗಳ ನಿರ್ಮಾಣಕ್ಕೆ 8 ಸಾವಿರ ಕೋಟಿ ರೂ.ಅಗತ್ಯ- ಡಿಸಿಎಂ ಕಾರಜೋಳ
![ನೆರೆ ಹಾವಳಿ: ರಸ್ತೆ-ಸೇತುವೆಗಳ ನಿರ್ಮಾಣಕ್ಕೆ 8 ಸಾವಿರ ಕೋಟಿ ರೂ.ಅಗತ್ಯ- ಡಿಸಿಎಂ ಕಾರಜೋಳ ನೆರೆ ಹಾವಳಿ: ರಸ್ತೆ-ಸೇತುವೆಗಳ ನಿರ್ಮಾಣಕ್ಕೆ 8 ಸಾವಿರ ಕೋಟಿ ರೂ.ಅಗತ್ಯ- ಡಿಸಿಎಂ ಕಾರಜೋಳ](https://www.varthabharati.in/sites/default/files/images/articles/2019/08/29/207597-1567095481.jpg)
ಬೆಂಗಳೂರು, ಆ.29: ನೆರೆ ಹಾವಳಿಯಿಂದ ಹಾನಿಯಾಗಿರುವ ರಸ್ತೆ, ಸೇತುವೆ ಗಳ ನಿರ್ಮಾಣಕ್ಕಾಗಿ ಕನಿಷ್ಠ ಎಂಟು ಸಾವಿರ ಕೋಟಿ ರೂ.ಖರ್ಚಾಗಲಿದೆ. ತಾತ್ಕಾಲಿಕವಾಗಿ ಸಂಪರ್ಕ ಕಲ್ಪಿಸಲು ರಸ್ತೆ ಕಾಮಗಾರಿಗಳಿಗೆ 500 ಕೋಟಿ ರೂ.ಬಿಡುಗಡೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಸ್ತೆಗಳ ನಿರ್ವಹಣೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ. ಇಂಜಿನಿಯರ್ಗಳು ಸೇರಿದಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಮ್ಮ ದಿನಚರಿಯನ್ನು ಬದಲಿಸಿಕೊಳ್ಳುವಂತೆ ತಾಕೀತು ಮಾಡಲಾಗಿದೆ ಎಂದರು.
ಪ್ರತಿ ದಿನ ಅಧಿಕಾರಿಗಳು ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಸ್ಥಳದಲ್ಲಿ ಇದ್ದು ಕೆಲಸ ಮಾಡಬೇಕು. ಮಧ್ಯಾಹ್ನದ ನಂತರ ಕಚೇರಿಯಲ್ಲಿ ಕೂತು ಕಡತಗಳ ಕೆಲಸ ಮಾಡಬೇಕು. ಅಲ್ಲದೇ, ಅವರ ಮಾಸಿಕ ದಿನಚರಿಯ ವಿವರಗಳನ್ನು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ಅವೈಜ್ಞಾನಿಕವಾಗಿರುವ ರಸ್ತೆ ಉಬ್ಬುಗಳನ್ನು ತೆರವುಗೊಳಿಸುವಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಅದೇ ರೀತಿ ರಾಜ್ಯದಲ್ಲಿರುವ ಎಲ್ಲ ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ತೆರವು ಮಾಡುವಂತೆ ಸೂಚನೆ ನೀಡಲಾಗಿದೆ. ಇದರಿಂದಾಗಿ, ಅಪಘಾತಗಳ ಪ್ರಮಾಣ ಇಳಿಮುಖವಾಗುತ್ತದೆ. ಕಳೆದ ವರ್ಷ ರಸ್ತೆ ಅಪಘಾತದಲ್ಲಿ 10,600 ಮಂದಿ ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ ಎಂದು ಗೋವಿಂದ ಕಾರಜೋಳ ಮಾಹಿತಿ ನೀಡಿದರು.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬರುವಂತಹ 34 ಸೇತುವೆಗಳು ಹಾನಿಯಾಗಿವೆ. ರಾಜ್ಯ ಹೆದ್ದಾರಿಯ ಸುಮಾರು 600 ಕಿ.ಮೀ.ರಸ್ತೆ ಹಾಳಾಗಿದೆ. ರಸ್ತೆಗಳ ಪುನರ್ ನಿರ್ಮಾಣಕ್ಕೆ ತ್ವರಿತಗತಿಯಲ್ಲಿ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.
ಲೋಕೋಪಯೋಗಿ ಇಲಾಖೆಗೆ ಬಜೆಟ್ನಲ್ಲಿ 10 ಸಾವಿರ ಕೋಟಿ ರೂ.ಗಳ ಅನುದಾನ ಹಂಚಿಕೆಯಾಗಿದೆ. ಇಲಾಖೆಯಲ್ಲಿ ಸುಮಾರು 2500 ಕೋಟಿ ರೂ.ಗಳಷ್ಟು ಹಳೆಯ ಬಾಕಿ ಪಾವತಿ ಮಾಡಬೇಕಿದೆ. ನೆರೆ ಹಾವಳಿಯಿಂದಾಗಿ ಕೆಲವು ಹೊಸ ಯೋಜನೆಗಳ ಕಾಮಗಾರಿಯನ್ನು ಕೈ ಬಿಡಬೇಕಾದ ಪರಿಸ್ಥಿತಿ ಬರಬಹುದು ಎಂದು ಗೋವಿಂದ ಕಾರಜೋಳ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕೌಶಲ್ಯ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಉದ್ಯೋಗ ಆಧಾರಿತ ಕೋರ್ಸುಗಳ ಮೂಲಕ ಅವರಿಗೆ ತರಬೇತಿ ನೀಡಲಾಗುವುದು. ರಾಜ್ಯದಲ್ಲಿ 824 ವಸತಿ ಶಾಲೆಗಳಿದ್ದು, ಸುಮಾರು 1.73 ಲಕ್ಷ ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ವಸತಿ ಶಾಲೆಗಳ ಸುಧಾರಣೆಗೂ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಗೋವಿಂದ ಕಾರಜೋಳ ಹೇಳಿದರು.
ಕೃತಜ್ಞತೆಗಳು: ಅನುಭವ ಹಾಗೂ ಹಿರಿತನ ಪರಿಗಣಿಸಿ, ಸಾಮಾಜಿಕ ನ್ಯಾಯ ಕೊಡುವ ಹಿನ್ನೆಲೆಯಲ್ಲಿ ನಮಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಳೆದ 25 ವರ್ಷಗಳಿಂದ ನನಗೆ ಆಶೀರ್ವಾದ ಮಾಡುತ್ತಿರುವ ಬಾಗಲಕೋಟೆ ಜಿಲ್ಲೆಯ ಮುಧೋಳ ಕ್ಷೇತ್ರದ ಜನತೆಗೆ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಮೂಲೆಗುಂಪು: ಕೇಂದ್ರ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಎಲ್ಲಿಯವರೆಗೂ ಸಕ್ರಿಯವಾಗಿರುತ್ತಾರೋ ಅಲ್ಲಿಯವರೆಗೆ ಕಾಂಗ್ರೆಸ್ನವರು ರಸ್ತೆಯಲ್ಲೇ ಇರುತ್ತಾರೆ. ರಾಜ್ಯಪಾಲರು, ರಾಷ್ಟ್ರಪತಿಯವರನ್ನು ಭೇಟಿ ಮಾಡುವುದು, ರಸ್ತೆಗಳಲ್ಲಿ ಕೂತು ಧರಣಿ ಮಾಡುವುದಷ್ಟೇ ಕಾಂಗ್ರೆಸ್ಸಿಗರ ಹಣೆಬರಹವಾಗಿರುತ್ತದೆ ಎಂದು ಅವರು ಹೇಳಿದರು.