ರಾಜೀವ್ ಗಾಂಧಿ ಹತ್ಯೆ ಪ್ರಕರಣ: ಅವಧಿ ಪೂರ್ವ ಬಿಡಗಡೆ ಕೋರಿ ನಳಿನಿ ಸಲ್ಲಿಸಿದ ಮನವಿ ತಿರಸ್ಕೃತ

ಚೆನ್ನೈ, ಆ. 29: ತಾನು ಸೇರಿದಂತೆ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ 7 ಜನರನ್ನು ಅವಧಿಗೆ ಮುನ್ನವೇ ಬಿಡುಗಡೆಗೊಳಿಸುವ ತನ್ನ ಶಿಫಾರಸಿನ ಬಗ್ಗೆ ರಾಜ್ಯಪಾಲರು ನಿರ್ಧಾರ ತೆಗೆದುಕೊಳ್ಳಲು ಒತ್ತಡ ಹೇರುವಂತೆ ರಾಜ್ಯಕ್ಕೆ ನಿರ್ದೇಶಿಸಲು ಕೋರಿ ಪ್ರಕರಣದ ದೋಷಿ ನಳಿನಿ ಶ್ರೀಹರನ್ ಸಲ್ಲಿಸಿದ ಮನವಿಯನ್ನು ಮದ್ರಾಸ್ ಉಚ್ಚ ನ್ಯಾಯಾಲಯ ಗುರುವಾರ ತಳ್ಳಿ ಹಾಕಿದೆ.
ಮನವಿಯನ್ನು ತಳ್ಳಿ ಹಾಕಿರುವ ನ್ಯಾಯಮೂರ್ತಿಗಳಾದ ಆರ್. ಸುಬ್ಬಯ್ಯ ಹಾಗೂ ಸಿ. ಶರವಣನ್ ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠ, ನಳಿನಿ ಹಾಗೂ ಇತರ 6 ಮಂದಿಯನ್ನು ಅವಧಿಗಿಂತ ಮುನ್ನವೇ ಬಿಡುಗಡೆ ಮಾಡುವಂತೆ ಈಗಾಗಲೇ ಸಚಿವರ ಮಂಡಳಿ ರಾಜ್ಯಪಾಲರಿಗೆ ಶಿಫಾರಸು ಮಾಡಿದೆ. ಆದುದರಿಂದ ಆಕೆಯ ಪ್ರತಿನಿಧಿತ್ವವನ್ನು ಪರಿಗಣಿಸಬೇಕು ಎಂದು ನಿರ್ದೇಶಿಸಿ ಆಜ್ಞೆ ಹೊರಡಿಸುವ ಪ್ರಶ್ನೆ ಉದ್ಬವಿಸುವುದಿಲ್ಲ ಎಂದು ಹೇಳಿದ್ದಾರೆ.
ಎಲ್ಲ 7 ಮಂದಿ ದೋಷಿಗಳನ್ನು ಅವಧಿಗಿಂತ ಮುನ್ನ ಬಿಡುಗಡೆ ಮಾಡುವಂತೆ ಶಿಫಾರಸು ಮಾಡಿ 2018 ಸೆಪ್ಟಂಬರ್ 9ರಂದು ತಮಿಳುನಾಡು ಸರಕಾರ ಹೊರಡಿಸಿದ ನಿರ್ಧಾರದ ಆಧಾರದಲ್ಲಿ ನಳಿನಿ ಈ ಮನವಿ ಸಲ್ಲಿಸಿದ್ದಾರೆ.
ನಳಿನಿ, ಆಕೆಯ ಪತಿ ಶ್ರೀಹರನ್ ಆಲಿಯಾಸ್ ಮುರುಗನ್, ಪೇರರಿವಾಲನ್, ರಾಬರ್ಟ್ ಪಯಾಸ್, ಜಯಕುಮಾರ್, ರವಿಚಂದ್ರನ್ ಹಾಗೂ ಸಂತಾನ್ ರನ್ನು ಬಿಡುಗಡೆ ಮಾಡುವಂತೆ ರಾಜ್ಯಪಾಲರಿಗೆ ಸಂಪುಟ ಶಿಫಾರಸು ಮಾಡಿತ್ತು.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಶ್ರೀಪೆರಂಬದೂರ್ ಸಮೀಪ 1991 ಮೇ 21ರಂದು ಚುನಾವಣಾ ರ್ಯಾಲಿಯ ಸಂದರ್ಭ ಎಲ್ಟಿಟಿಇ ಆತ್ಮಹತ್ಯಾ ಬಾಂಬ್ ಬಳಸಿ ಹತ್ಯೆ ನಡೆಸಿತ್ತು.