ಮಂಗಳೂರಿನ ಉದ್ಯಮಿಯ ಶೂಟೌಟ್ ಪ್ರಕರಣ: ವಾರಂಟ್ ಆರೋಪಿ ಸೆರೆ

ದೀಕ್ಷಿತ್ ಪೂಜಾರಿ
ಮಂಗಳೂರು, ಆ.30: ಮಂಗಳೂರಿನ ಉದ್ಯಮಿ ವಿಜಯೇಂದ್ರ ಭಟ್ ರಿಗೆ ಶೂಟೌಟ್ ಪ್ರಕರಣ ಸೇರಿದಂತೆ ಏಳು ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಾರಂಟ್ ಆರೋಪಿಯನ್ನು ದಕ್ಷಿಣ ಉಪವಿಭಾಗದ ರೌಡಿ ನಿಗ್ರಹ ದಳ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ನಿಡ್ಡೆಲ್ ಮರೋಳಿ ನಿವಾಸಿ ದೀಕ್ಷಿತ್ ಪೂಜಾರಿ (31) ಬಂಧಿತ ಆರೋಪಿ.
ಪ್ರಕರಣ ವಿವರ
ಭೂಗತ ಲೋಕದ ಪಾತಕಿ ವಿಕ್ಕಿ ಶೆಟ್ಟಿ ಸೂಚನೆಯಂತೆ ಬಳ್ಳಾಲ್ಬಾಗ್ನಲ್ಲಿ ಸುಧೀಂದ್ರ ಸೂಪರ್ ಮಾರ್ಕೆಟ್ ಮತ್ತು ಸಾಯ್ಬಿನ್ ಕಾಂಪ್ಲೆಕ್ಸ್ ಮಾಲಕ, ಉದ್ಯಮಿ ವಿಜಯೇಂದ್ರ ಭಟ್ ಅವರ ಕಾರಿಗೆ ಪಿಸ್ತೂಲಿನಿಂದ ಗುಂಡು ಹೊಡೆದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಖಚಿತ ಮಾಹಿತಿ ಮೇರೆಗೆ ಮಂಗಳೂರು ದಕ್ಷಿಣ ಎಸಿಪಿ ಟಿ.ಕೋದಂಡರಾಮ್ ನೇತೃತ್ವದಲ್ಲಿ ಬಂಧಿಸಲಾಗಿದೆ.
ಮಂಗಳೂರು ನಗರ ಮತ್ತು ಉಡುಪಿ ಸೇರಿದಂತೆ ಏಳು ಪ್ರಕರಣಗಳಲ್ಲಿ ಆರೋಪಿ ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಅಲ್ಲದೆ, ಬರ್ಕೆ ಠಾಣೆಯಲ್ಲಿ ಕೊಲೆ ಪ್ರಕರಣ, ಶೂಟೌಟ್ ಪ್ರಕರಣ ಸೇರಿದಂತೆ ಮೂರು ಪ್ರಕರಣ, ಪಾಂಡೇಶ್ವರ ಠಾಣೆಯಲ್ಲಿ ಕೊಲೆ ಪ್ರಕರಣ, ಮಂಗಳೂರು ಉತ್ತರ (ಬಂದರ್) ಠಾಣೆಯಲ್ಲಿ ಹಲ್ಲೆ ಪ್ರಕರಣ, ಮಂಗಳೂರು ಪೂರ್ವ (ಕದ್ರಿ) ಠಾಣೆಯಲ್ಲಿ ಗಾಂಜಾ ಮತ್ತು ಹಲ್ಲೆ ಪ್ರಕರಣ, ಸುರತ್ಕಲ್ ಠಾಣೆಯಲ್ಲಿ ಹಲ್ಲೆ ಪ್ರಕರಣ, ಉರ್ವ ಠಾಣೆಯಲ್ಲಿ ಹಲ್ಲೆ ಪ್ರಕರಣ ಹಾಗೂ ಉಡುಪಿ ಠಾಣೆಯಲ್ಲಿ ಆರ್ಮ್ಸ್ ಆ್ಯಕ್ಟ್ ಮತ್ತು ಕಾವೂರು, ಕದ್ರಿ, ಬರ್ಕೆ ಮತ್ತು ಪಾಂಡೇಶ್ವರ ಠಾಣೆ ಸೇರಿದಂತೆ ಏಳು ಪ್ರಕರಣಗಳಲ್ಲಿ ಆರೋಪಿ ತಲೆಮರೆಸಿಕೊಂಡಿದ್ದ. ಅಲ್ಲದೆ, ಈತನ ವಿರುದ್ಧ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ಆರೋಪಿಯನ್ನು ಬಂಧಿಸಿ ಉಳ್ಳಾಲ ಠಾಣೆಗೆ ಹಸ್ತಾಂತರಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ನಿರ್ದೇಶನದಂತೆ ಡಿಸಿಪಿಗಳಾದ ಅರುಣಾಂಕ್ಷು ಗಿರಿ, ಲಕ್ಷ್ಮೀ ಗಣೇಶ್, ಎಸಿಪಿ ಟಿ.ಕೋದಂಡರಾಮ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ದಕ್ಷಿಣ ರೌಡಿ ನಿಗ್ರಹ ದಳ ಸಿಬ್ಬಂದಿ ಪಾಲ್ಗೊಂಡಿದ್ದರು.







