ಬೃಹತ್ ಬ್ಯಾಂಕ್ ವಂಚನೆಗಳಿಗೆ ಅವಕಾಶ ನೀಡುತ್ತಿರುವವರು ಯಾರು?: ಆರ್ಬಿಐ ವರದಿ ಕುರಿತು ಪ್ರಿಯಾಂಕಾ ವಾಗ್ದಾಳಿ

ಹೊಸದಿಲ್ಲಿ, ಆ.30: ಹಿಂದಿನ ವರ್ಷಕ್ಕೆ ಹೋಲಿಸಿದರೆ 2018-19ನೇ ಹಣಕಾಸು ವರ್ಷದಲ್ಲಿ ಬ್ಯಾಂಕ್ ವಂಚನೆಗಳು ಶೇ.15ರಷ್ಟು ಹೆಚ್ಚಾಗಿವೆ ಎಂದು ಆರ್ಬಿಐ ವರದಿಯು ಬೆಟ್ಟು ಮಾಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸರಕಾರದ ವಿರುದ್ಧ ದಾಳಿ ನಡೆಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು,ಇಂತಹ ಬೃಹತ್ ಬ್ಯಾಂಕ್ ವಂಚನೆಗಳಿಗೆ ಅವಕಾಶ ನೀಡುತ್ತಿರುವ ಖಾತರಿದಾರ ಯಾರು ಎಂದು ಪ್ರಶ್ನಿಸಿದ್ದಾರೆ.
ಸರಕಾರದ ಮೂಗಿನಡಿಯೇ ಬ್ಯಾಂಕ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ಆರ್ಬಿಐ ಹೇಳುತ್ತಿದೆ. 2018-19ರಲ್ಲಿ ಈ ಕಳ್ಳತನ ಹೆಚ್ಚಿದೆ ಎಂದು ಟ್ವೀಟಿಸಿರುವ ಪ್ರಿಯಾಂಕಾ,ಬ್ಯಾಂಕುಗಳಿಗೆ 72,000 ಕೋ.ರೂ.ಗಳನ್ನು ವಂಚಿಸಲಾಗಿದೆ. ಇಂತಹ ಬೃಹತ್ ಬ್ಯಾಂಕ್ ವಂಚನೆಗಳಿಗೆ ಅವಕಾಶ ನೀಡುತ್ತಿರುವವರು ಯಾರು ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ನ ಮುಖ್ಯ ವಕ್ತಾರ ರಣದೀಪ ಸುರ್ಜೆವಾಲಾ ಅವರೂ ಹೆಚ್ಚುತ್ತಿರುವ ಬ್ಯಾಂಕ್ ವಂಚನೆಗಳ ಕುರಿತು ಸರಕಾರವನ್ನು ತರಾಟೆಗೆತ್ತಿಕೊಂಡಿದ್ದು, ‘ನವ ಭಾರತ ’ದಲ್ಲಿ ‘ಲೂಟ್ ಆ್ಯಂಡ್ ಸ್ಕೂಟ್(ದೋಚಿ ಪರಾರಿಯಾಗು)’ ನಡೆಯುತ್ತಿದ್ದು,ಇದರಲ್ಲಿ ಸಹಭಾಗಿ ಬಿಜೆಪಿ ಜಾಣಗುರುಡು ತೋರಿಸುತ್ತಿದೆ ಮತ್ತು ಜನಸಾಮಾನ್ಯರ ಮೇಲೆ ತೆರಿಗೆಯನ್ನು ಹೊರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.