ಮಾಧ್ಯಮ ಸ್ವಾತಂತ್ರದ ಖಾತರಿ ನೀಡಲು ಕೇಂದ್ರ ಸರಕಾರ ಬದ್ಧ: ಪ್ರಕಾಶ್ ಜಾವ್ಡೇಕರ್

ಕೊಚ್ಚಿ, ಆ. 30: ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರ ಮಾಧ್ಯಮ ಸ್ವಾತಂತ್ರದ ಖಾತರಿ ನೀಡಲು ಬದ್ಧವಾಗಿದೆ ಎಂದು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವ ಪ್ರಕಾಶ್ ಜಾವ್ಡೇಕರ್ ಶುಕ್ರವಾರ ಹೇಳಿದ್ದಾರೆ.
ಪತ್ರಿಕಾ ಸ್ವಾತಂತ್ರ ರಕ್ಷಿಸಲು 1975ರ ತುರ್ತು ಪರಿಸ್ಥಿತಿ ವಿರುದ್ಧ ಪಕ್ಷದ ನಾಯಕರು ನಡೆಸಿದ ಹೋರಾಟವನ್ನು ಅವರು ನೆನಪಿಸಿಕೊಂಡರು.
ಮಲಯಾಳಂ ಮನೋರಮಾ ದಿನಪತ್ರಿಕೆ ಇಲ್ಲಿ ಆಯೋಜಿಸಿದ್ದ ‘ನ್ಯೂ ಇಂಡಿಯಾ: ಗವರ್ನಮೆಂಟ್ ಆ್ಯಂಡ್ ಮೀಡಿಯಾ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿ ಚಳವಳಿಯ ದಿನಗಳಲ್ಲಿ ಮಾಧ್ಯಮ ಸ್ವಾತಂತ್ರ ರಕ್ಷಿಸುವಂತೆ ಆಗ್ರಹಿಸಿ 1975ರ ತುರ್ತು ಪರಿಸ್ಥಿತಿ ವಿರುದ್ಧ ನಾವು ಹೋರಾಟ ನಡೆಸಿದ್ದೆವು ಹಾಗೂ ಜೈಲಿಗೆ ಕೂಡ ಹೋಗಿದ್ದೆವು. ಆ ಬದ್ಧತೆ ಈಗಲೂ ಇದೆ. ಮಾಧ್ಯಮ ಸ್ವಾತಂತ್ರ್ಯನ್ನು ಯಾವಾಗಲೂ ರಕ್ಷಿಸಬೇಕು ಎಂದು ಅವರು ಹೇಳಿದರು.
ದೇಶದಲ್ಲಿ ಲಕ್ಷಕ್ಕೂ ಅಧಿಕ ಪತ್ರಿಕೆಗಳು, 700ಕ್ಕೂ ಅಧಿಕ ಟಿ.ವಿ. ಚಾನೆಲ್ಗಳು, ಹಲವು ವೆಬ್ ಹಾಗೂ ಸುದ್ದಿ ಪೋರ್ಟಲ್ಗಳು ಇವೆ ಎಂದ ಅವರು, ಸಾಮಾಜಿಕ ಮಾಧ್ಯಮ ವೇದಿಕೆ ಇರುವುದರಿಂದ ಯಾರೊಬ್ಬರ ಸಂವಹನವನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಇದು ಸಂವಹನದ ಶಕ್ತಿ ಎಂದು ಅವರು ಹೇಳಿದ್ದಾರೆ.
ಜವಾಬ್ದಾರಿಯುತ ಸ್ವಾತಂತ್ರ ಪ್ರಜಾಪ್ರಭುತ್ವ ಸಮಾಜದ ಸತ್ವ ಎಂದು ಹೇಳಿದ ಅವರು, ಜವಾಬ್ದಾರಿಯುತ ಸ್ವಾತಂತ್ರ ಅಂದರೆ, ನಿಯಂತ್ರಿತ ಸ್ವಾತಂತ್ರ ಅಲ್ಲ. ಆದರೆ, ಸ್ವಾತಂತ್ರ ಅನುಭವಿಸುವಾಗ ಜವಾಬ್ದಾರಿ ಇರಬೇಕು ಎಂದು ಅರ್ಥ ಎಂದು ಅವರು ತಿಳಿಸಿದರು.