ಮೈಸೂರು ದಸರಾ: ಪ್ರವಾಸಿಗರ ಅನುಕೂಲಕ್ಕಾಗಿ ಮಾಹಿತಿ ಕೇಂದ್ರ ಆರಂಭ- ಸಚಿವ ವಿ.ಸೋಮಣ್ಣ

ಮೈಸೂರು,ಆ.30: ದಸರಾ ಹಿನ್ನಲೆಯಲ್ಲಿ ಮೈಸೂರಿಗೆ ಬರುವ ಪ್ರವಾಸಿಗರ ಅನುಕೂಲಕ್ಕೆ ನಾಲ್ಕರಿಂದ ಐದು ಕಡೆಗಳಲ್ಲಿ ಮಾಹಿತಿ ಕೇಂದ್ರ ತೆರೆದು ಅಗತ್ಯ ಮಾಹಿತಿಗಳನ್ನು ನೀಡಲಾಗುವುದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.
ನಗರದ ಜನಲದರ್ಶಿನಿ ಅತಿಥಿಗೃಹದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಸಭೆ ನಡೆಸಿ ಪತ್ರಕರ್ತರಿಂದ ಸಲಹೆ ಸೂಚನೆ ಪಡೆದರು. ನಂತರ ಮಾತನಾಡಿದ ಅವರು, ಪ್ರವಾಸಿಗರ ಅನುಕೂಲಕ್ಕೆ ಮೈಸೂರಿನ ಹೃದಯ ಭಾಗಗಳಲ್ಲಿ ನಾಲ್ಕರಿಂದ ಐದು ಕಡೆ ಮಾಹಿತಿ ಕೇಂದ್ರ ತೆರೆಯಲಾಗುವುದು. ಈ ಹಿಂದೆ ಮಾಹಿತಿ ಕೇಂದ್ರಗಳನ್ನು ತೆರೆಯಲಾಗುತ್ತಿತ್ತಾದರೂ, ಪೊಲೀಸರಿಗೆ ನೀಡಲಾಗುತಿತ್ತು, ಸರಿಯಾದ ಮಾಹಿತಿ ಪ್ರವಾಸಿಗರಿಗೆ ದೊರಕುತ್ತಿರಲಿಲ್ಲ ಎಂಬ ದೂರುಗಳು ಬಂದಿದ್ದವು. ಹಾಗಾಗಿ ಈ ಬಾರಿ ಮಾಹಿತಿ ಕೇಂದ್ರಗಳಲ್ಲಿ ಸ್ವಯಂ ಸೇವಕರನ್ನು ಕೂರಿಸಿ ಮಾಹಿತಿ ಒದಗಿಸಲಾಗುವುದು ಎಂದು ಹೇಳಿದರು.
ಗಜಪಡೆ ತಾಲೀಮು ಆ.31 ರ ಶನಿವಾರ ಬನ್ನಿಮಂಟಪದವರೆಗೂ ಸಾಗಲಿದೆ
ಅರ್ಜುನ ನೇತೃತ್ವದ ಆರು ಆನೆಗಳಿಂದ ಈಗಾಗಲೇ ತಾಲೀಮು ಆರಂಭವಾಗಿದ್ದು, ನಾಳೆ ಗಜಪಡೆ ಜೊತೆ ತಾಲೀಮು ನಡೆಯಲಿದೆ. ಮೈಸೂರಿನ ಅರಮನೆ ಮುಂಭಾಗದಿಂದ ಬನ್ನಿ ಮಂಟಪದವರೆಗೆ ಸಾಗಲಿದ್ದು, ನಾನೂ ಜೊತೆಯಲ್ಲಿ ಇರಲಿದ್ದೇನೆ. ಇದೇ ಮೊದಲ ಬಾರಿಗೆ ವಿಶೇಷವಾಗಿ ಗಜಪಡೆ ಜೊತೆ ತಾಲೀಮು ನಡೆಸಲಾಗಿದ್ದು, ವಿಶೇಷವಾಗಿ ದಸರಾ ಆಚರಿಸಲಾಗುವುದು ಎಂದರು.
ಬೆಳಗ್ಗೆ ಚಾಮುಂಡೇಶ್ವರಿ ಬೆಟ್ಟದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದೇನೆ. ಅಲ್ಲಿ ತುಂಬ ಅಭಿವೃದ್ಧಿ ಆಗಬೇಕಿದೆ. ದಾಸೋಹ ಭವನ ಚಿಕ್ಕದಿದೆ, ಭಕ್ತರು ಪ್ರಸಾದ ಸ್ವೀಕರಿಸುವಾಗ ತೊಂದರೆಯಾಗುತ್ತಿದೆ. ಆದ್ದರಿಂದ ಬೇರೆ ಸ್ಥಳದಲ್ಲಿ ದಾಸೋಹ ಭವನ ನಿರ್ಮಾಣಕ್ಕೆ ಮುಂದಾಗುತ್ತೇನೆ. ದಸರಾ ನಂತರ ಚರ್ಚಿಸಿ ದಾಸೋಹ ನಿರ್ಮಾಣದ ಸಾಧಕ ಬಾಧಕಗಳನ್ನು ಚರ್ಚಿಸೋಣ ಎಂದರು.
ಪ್ರತಿ ವರ್ಷ ಸ್ತಬ್ಧ ಚಿತ್ರಗಳು ಅದದೇ ಆಗಮಿಸುತ್ತದೆ. ಬದಲಿ ಸ್ತಬ್ಧ ಚಿತ್ರಗಳು ಆಗಬೇಕೆಂದು, ಮೈಸೂರಿನವರೇ ಟೆಂಡರ್ ತೆಗೆದುಕೊಳ್ಳುತ್ತಾರೆ, ಬೇರೆಯವರಿಗೆ ಅವಕಾಶವೇ ಸಿಗಲ್ಲ, ವಸ್ತು ಪ್ರದರ್ಶನದಲ್ಲಿರುವ ಆಹಾರ ಮಳಿಗೆ, ಫನ್ ವರ್ಡ್ ಸೇರಿದಂತೆ ಇತರೆ ಮಳಿಗೆಗಳ ಟೆಂಡರ್ ಒಬ್ಬರಿಗೆ ಪ್ರತಿ ವರ್ಷ ಸಿಗುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬದಲಿ ಸ್ತಬ್ಧ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದರು. ಟೆಂಡರ್ ಕುರಿತು ಚರ್ಚಿಸುತ್ತೇನೆ ಎಂದರು. ಮಾಧ್ಯಮ ಪಾಸ್ ವ್ಯವಸ್ಥೆ ವಿಚಾರಕ್ಕೆ ಪ್ರತಿಕ್ರಿಯಿಸಿ ದಸರಾ ಆರಂಭಕ್ಕೂ ಮುನ್ನ ಮಾಧ್ಯಮದವರಿಗೆ ಪಾಸ್ ವ್ಯವಸ್ಥೆ ಮಾಡಿಕೊಡುತ್ತೀನಿ. ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತೆರಳಲು ಅವಕಾಶ ಮಾಡಿಕೊಡ್ತೀನಿ. ಎಲ್ಲೂ ಮಾಧ್ಯಮದವರನ್ನು ತಡೆಯದಂತೆ ಪೊಲೀಸರಿಗೆ ಸೂಚಿಸುತ್ತೇನೆ ಎಂದರು.
ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ, ಮಾಜಿ ಸಚಿವ ಶಿವಣ್ಣ, ನಗರಾಧ್ಯಕ್ಷ ಡಾ.ಮಂಜುನಾಥ್, ಕುಂಬ್ರಹಳ್ಳಿ ಸುಬ್ಬಣ್ಣ, ಬಿ.ಹೆಚ್. ಹೆಚ್.ವಿ.ರಾಜೀವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







