ಜಾರಿ ನಿರ್ದೇಶನಾಲಯದ ಮುಂದೆ ಹಾಜರಾದ ಡಿಕೆಶಿ

ಹೊಸದಿಲ್ಲಿ, ಆ,31: ದಾಖಲೆ ಇಲ್ಲದ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಜಾರಿ ನಿರ್ದೇಶನಾಲಯದ ಮುಂದೆ ಶನಿವಾರ ಹಾಜರಾದರು.
57ರ ಹರೆಯದ ಡಿಕೆಶಿ “ ನನಗೆ ವ್ಯವಸ್ಥೆ ಮತ್ತು ಕಾನೂನಿನ ಬಗ್ಗೆ ನಂಬಿಕೆ ಇದೆ. ನಾನು ಯಾವುದೇ ತಪ್ಪು ಮಾಡಿಲ್ಲ ಮತ್ತು ತನಿಖಾ ಸಂಸ್ಥೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಇಡಿ ಕಚೇರಿಯ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.
ಜಾರಿ ನಿರ್ದೇಶನಾಲಯವು ಗುರುವಾರ ತಡರಾತ್ರಿ ಶಿವಕುಮಾರ್ ಅವರನ್ನು ಕರೆದು ತನ್ನ ಮುಂದೆ ಹಾಜರಾಗುವಂತೆ ತಿಳಿಸಿತ್ತು. ಡಿಸೆಂಬರ್ 2018 ರ ಸಮನ್ಸ್ ನ್ನು ಪ್ರಶ್ನಿಸಿ ಡಿಕೆಶಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅವರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.
"ನಾವು ಶಾಸಕರು ಮತ್ತು ಕಾನೂನು ಪಾಲಿಸುವ ನಾಗರಿಕರು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ(ಪಿಎಂಎಲ್ಎ) ಅವರು ನನ್ನನ್ನು ಏಕೆ ಕರೆಸಿದರು ಎಂದು ನನಗೆ ತಿಳಿದಿಲ್ಲ" ಎಂದು ಅವರು ಹೇಳಿದ್ದಾರೆ. ತನ್ನ ವಿರುದ್ಧದ ಭ್ರಷ್ಟಾಚಾರದ ಆರೋಪಗಳನ್ನು ಅವರು ತಳ್ಳಿ ಹಾಕಿದ್ದಾರೆ.
"ಇದು ಎಲ್ಲಾ ಪಿತೂರಿ. ನಾನು ಯಾವುದೇ ತಪ್ಪು ಮಾಡಿಲ್ಲ. ಕೊಲೆ ಅಥವಾ ಭ್ರಷ್ಟಾಚಾರದಲ್ಲಿ ತೊಡಗಿಲ್ಲ. ನೀವು ಕಂಡುಕೊಂಡ ಹಣ ಅದು ನನ್ನದು ಮತ್ತು ನಾನು ಅದನ್ನು ಸಂಪಾದಿಸಿದ್ದೇನೆ '' ಎಂದು ಅವರು ಹೇಳಿದ್ದಾರೆ.