ಗಣೇಶೋತ್ಸವದಲ್ಲಿ ಎಲ್ಲಾ ಸೂಚನೆಗಳನ್ನು ಪಾಲಿಸಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ಆ.31: ಗಣೇಶೋತ್ಸವಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ಬಳಸಿ ತಯಾರಿಸಿದ ಯಾವುದೇ ಗಣೇಶ ವಿಗ್ರಹವನ್ನು ಬಳಸುವಂತಿಲ್ಲ ಹಾಗೂ ಅವುಗಳನ್ನು ವಿಸರ್ಜಿಸಲು ಯಾವುದೇ ಅವಕಾಶ ಇರುವುದಿಲ್ಲ. ಒಂದು ವೇಳೆ ಬಳಸಿದಲ್ಲಿ ಇಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ರಾಸಾಯನಿಕ ಬಣ್ಣಗಳನ್ನು ಉಪಯೋಗಿಸಿದ ವಿಗ್ರಹಗಳನ್ನು ಕೂಡ ಬಳಸುವಂತಿಲ್ಲ, ಈ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡುವಂತೆ ಪರಿಸರ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಗಣೇಶೋತ್ಸವ ಆಚರಣೆ ಸಂಬಂಧ ಕಾನೂನು ಸುವ್ಯವಸ್ಥೆ ಕಾಪಾಡುವ ಬಗ್ಗೆ ಹಾಗೂ ಪರಿಸರ ಮಾಲಿನ್ಯ ತಡೆಗಟ್ಟುವ ಕುರಿತು ಶುಕ್ರವಾರ ಕರೆದ ಪೂರ್ವಭಾವಿ ಸೆಯಲ್ಲಿ ಅವರು ಮಾತನಾಡುತಿದ್ದರು.
ಗಣಪತಿ ಮೂರ್ತಿಯನ್ನು ಎಲ್ಲೆಂದರಲ್ಲಿ, ರಸ್ತೆ ಬದಿಯಲ್ಲಿ ಪ್ರತಿಷ್ಠಾಪನೆ ಮಾಡುವಂತಿಲ್ಲ ಎಂದು ತಿಳಿಸಿ ಅವರು, ಈ ಬಗ್ಗೆ ನಿಗದಿತ ಸ್ಥಳಗಳನ್ನು ಗುರುತಿಸಲಾಗಿದೆಯೇ ಎಂದು ನಗರಸಭಾ ಪೌರಾಯುಕ್ತರನ್ನು ಪ್ರಶ್ನಿಸಿದರು. ಆಯೋಜಕರು ಕೋರಿದ ಸ್ಥಳಗಳಲ್ಲಿ ಸ್ಥಳ ತನಿಖೆ ನಡೆಸಿ, ಆಕ್ಷೇಪ ಇಲ್ಲದ ಸ್ಥಳಗಳಲ್ಲಿ ಮಾತ್ರ ಗಣಪತಿ ಇಡಲು ಅನುಮತಿ ನೀಡಲಾಗುತ್ತಿದೆ ಎಂದು ಪೌರಾಯುಕ್ತರು ತಿಳಿಸಿದರು.
ಆಯೋಜಕರು ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಂದ ಅನುಮತಿ ಪಡೆದು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗು ವಂತೆ ಜೋರಾಗಿ ಮೈಕ್ ಅಳವಡಿಸಬಾರದು. ಮೆರವಣಿಗೆಯ ಸಂದರ್ಭದಲ್ಲಿ ಡಿಜೆ ಹಾಕಿ ತೊಂದರೆ ಕೊಡಬಾರದು. ಸರಕಾರಿ ನಿಯಮದಂತೆ ವಾಸಸ್ಥಳ ಪ್ರದೇಶದಲ್ಲಿ 55 ಡೆಸಿಮಲ್, ವಾಣಿಜ್ಯ ಪ್ರದೇಶದಲ್ಲಿ 65 ಡೆಸಿಮಲ್ ಶಬ್ದ ಪ್ರಮಾಣದಲ್ಲಿ ಬೆಳಿಗ್ಗೆ 6:00ರಿಂದ ರಾತ್ರಿ 10:00ಗಂಟೆ ತನಕ ಮಾತ್ರ ಪೊಲಿಸ್ ಇಲಾಖೆ ಅನುಮತಿ ಪಡೆದು ಮೈಕ್ ಅಳವಡಿಸಬೇಕು ಎಂದು ತಿಳಿಸಿದರು.
ವಿಸರ್ಜನಾ ಮೆರವಣಿಗೆಗೆ ಪೊಲೀಸ್ ಇಲಾಖೆಯ ಅನುಮತಿ ಪಡೆದು ಕೊಳ್ಳಬೇಕು. ಕಡ್ಡಾಯವಾಗಿ ಬಾರ್ಗಳನ್ನು ಮುಚ್ಚಬೇಕು. ಮೆರವಣಿಗೆ ಸಂದರ್ಭ ದಲ್ಲಿ ಕುಡಿದು ನೃತ್ಯ ಮಾಡುವುದು, ಗಲಾಟೆಗಳು ಸಂಭಸಿದಲ್ಲಿ ಇದಕ್ಕೆ ಕಾರ್ಯಕ್ರಮ ಆಯೋಜಕರೇ ಜವಾಬ್ದಾರರಾಗಿರುತ್ತಾರೆ. ಗಣೇಶೋತ್ಸವ ಆಚರಣೆಗಾಗಿ ಸಾರ್ವಜನಿಕರಲ್ಲಿ ಬಲವಂತವಾಗಿ ಚಂದಾ ಹಣ ವಸೂಲಿ ಮಾಡಾರದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಾಯಕ ಪರಿಸರ ಅಧಿಕಾರಿ ಮಾತನಾಡಿ ಈಗಾಗಲೇ ಮೂರ್ತಿ ತಯಾರಿಕಾ ಸ್ಥಳಗಳಿಗೆ ಭೇಟಿ ಕೊಟ್ಟು ಈ ಬಗ್ಗೆ ಅವರಿಗೆ ಮಾಹಿತಿ ನೀಡಲಾಗಿದೆ. ಈ ಬಗ್ಗೆ ಸಭೆ ನಡೆಸಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಇರುವುದಿಲ್ಲ ಎಂದು ಹೇಳಿದ ಅವರು ಶಾಲಾ/ಕಾಲೇಜುಗಳಲ್ಲಿ ಕೂಡ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಮಾತನಾಡಿ, ಹೊರಾಂಗಣ ವಾಗಲಿ ಅಥವಾ ಸಭಾಂಗಣವಾಗಲಿ ಕಾನೂನು ನಿಯಮಾನುಸಾರ ಬೆಳಗ್ಗೆ 6:00ರಿಂದ ರಾತ್ರಿ 10:00 ಗಂಟೆಯವರೆಗೆ ಮಾತ್ರ ಮೈಕ್ ಅಳವಡಿಸಲು ಅವಕಾಶವಿದೆ. ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದಲ್ಲಿ ತಾವು ಕ್ರಮ ಕೈಗೊಳ್ಳುವುದು ಅವಶ್ಯಕವಾಗುತ್ತದೆ. ಮೆರವಣಿಗೆಯಲ್ಲಿ ಡಿಜೆ ಅಳವಡಿಸ ಬಾರದೆಂದು ಈಗಾಗಲೇ ದೇಶದ ಸರ್ವೊಚ್ಛ ನ್ಯಾಯಾಲಯದಿಂದ ಆದೇಶ ವಾಗಿದೆ. ಆದ್ದರಿಂದ ಕಾನೂನು ಪಾಲಿಸುವಲ್ಲಿ ಎಲ್ಲರೂ ಸಹಕರಿಸಬೇಕೆಂದು ಕೋರಿದರು.
ಗಣಪತಿ ಪ್ರತಿಷ್ಠಾಪನೆ ಮಾಡುವ ಮೊದಲು ಈ ಕೆಳಕಂಡ ವಿಷಯಗಳ ಕುರಿತು ಕ್ರಮ ಕೈಗೊಳ್ಳಬೇಕು ಎಂದೂ ಅವರು ಹೇಳಿದರು.
1.ಸ್ಥಳವು ಸಾರ್ವಜನಿಕ ಜಾಗವಾಗಿದ್ದಲ್ಲಿ ಸ್ಥಳಿಯಾಡಳಿತದಿಂದ ಹಾಗೂ ಖಾಸಗಿ ಜಾಗವಾಗಿದ್ದಲ್ಲಿ ಜಾಗದ ಮಾಲಕರಿಂದ ಅನುಮತಿ ಪತ್ರ ಪಡೆಯಬೇಕು.
2. ಮೆಸ್ಕಾಂ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು.
3.ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು.
4.ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್ ಅಳವಡಿಸುವ ಸಂಬಂಧ ಸ್ಥಳಿಯಾಡಳಿತ ದಿಂದ ಅನುಮತಿ ಪತ್ರ ಪಡೆದಿರಬೇಕು. ಎಲ್ಲಾ ನಿರಾಕ್ಷೇಪಣಾ ಪತ್ರಗಳ ಪ್ರತಿಗಳನ್ನು ಹತ್ತಿರದ ಪೊಲಿಸ್ ಠಾಣೆಗೆ ಸಲ್ಲಿಸಬೇಕು. ಹಾಗು ನಿರಾಕ್ಷೇಪಣಾ ಪತ್ರಗಳಲ್ಲಿ ನೀಡಲಾಗಿರುವ ಷರತ್ತುಗನ್ನು ಕಡ್ಡಾಯವಾಗಿ ಪಾಲಿಸಬೇಕು.
5.ವಿಸರ್ಜನಾ ಮೆರವಣಿಗೆಯ ಮಾರ್ಗದ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಅವರಿಂದ ಅನುಮತಿ ಪಡೆದಿರಬೇಕು.
6.ಪೆಂಡಾಲ್ ಸುರಕ್ಷತೆ ಬಗ್ಗೆ ಹಾಗೂ ಮೆರವಣಿಗೆ ಸುರಕ್ಷತೆಯ ಬಗ್ಗೆ ಸ್ವಯಂ ಸೇವಕರನ್ನು ನೇಮಕ ಮಾಡಿ ಅವರ ವಿವರವನ್ನು ಪೋಲಿಸ್ ಠಾಣೆಗೆ ಸಲ್ಲಿಸಬೇಕು.
7.ಪೆಂಡಾಲ್ನಲ್ಲಿ ಕಡ್ಡಾಯವಾಗಿ ಸಿಸಿಟಿ ಅಳವಡಿಸಬೇಕು. 8.ಪೆಂಡಾಲ್ನಲ್ಲಿ ಅಡುಗೆ ಮಾಡ ಬಾರದು ಹಾಗೂ ಸ್ವಚ್ಛತೆಯ ಬಗ್ಗೆ ಗಮನ ಹರಿಸಬೇಕು.
8.ಪೆಂಡಾಲ್ನಲ್ಲಿ ಅಡುಗೆ ಮಾಡ ಬಾರದು ಹಾಗೂ ಸ್ವಚ್ಛತೆಯ ಬಗ್ಗೆ ಗಮನ ಹರಿಸಬೇಕು.
9.ಮೂರ್ತಿ ವಿಸರ್ಜನೆ ಮೆರವಣಿಗೆಯನ್ನು ಸರಿಯಾದ ಸಮಯಕ್ಕೆ ಪ್ರಾರಂಭಿಸಬೇಕು ಹಾಗೂ ರಾತ್ರಿ 10 ಗಂಟೆಯೊಳಗೆ ಮುಗಿಸಬೇಕು. ಇಲ್ಲವಾದಲ್ಲಿ ಇದರಿಂದ ಕಳ್ಳತನ/ಅಪಘಾತದಂತಹ ಅಹಿತಕರ ಘಟನೆಗಳು ಉಂಟಾಗುವ ಸಂಭವವಿರುತ್ತದೆ.ಮೆರವಣಿಗೆ ಸಮಯದಲ್ಲಿ ತಾಂತ್ರಿಕ ಕಾರಣಗಳಿಂದ ತೊಂದರೆ ಉಂಟಾಗುವುದನ್ನು ತಡೆಯಲು ಹೆಚ್ಚುವರಿ ಬದಲಿ ವ್ಯವಸ್ಥೆಯನ್ನು ಮಾಡಿಟ್ಟುಕೊಳ್ಳಬೇಕು.
10.ಗಣಪತಿ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸುವ ಸಮಯದಲ್ಲಿ ಜಾಗ್ರತೆ ವಹಿಸಬೇಕು. ಇದಕ್ಕಾಗಿ ಈಜುಗಾರರು, ಬೆಳಕಿನ ವ್ಯವಸ್ಥೆ, ಬ್ಯಾರಿಕೇಡ್ ವ್ಯವಸ್ಥೆಯನ್ನು ಮಾಡಿಟ್ಟುಕೊಳ್ಳತಕ್ಕದ್ದು.
ಗಣೇಶೋತ್ಸವ ಸಂದರ್ಭದಲ್ಲಿ ಇಲಾಖಾ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ರುವಂತೆ ಜಿಲ್ಲಾಧಿಕಾರಿ ಸೂಚಿಸಿದರು.







