1.17 ಕೋಟಿ ಮೊತ್ತದ ಹಳೆ ನೋಟುಗಳೊಂದಿಗೆ ಸುಪ್ರೀಂ ಮೆಟ್ಟಿಲೇರಿದ ಉದ್ಯಮಿ
ಸರಕಾರಕ್ಕೆ ನೋಟಿಸ್ ಜಾರಿ

ಚೆನ್ನೈ, ಆ.31: ಕೇಂದ್ರ ಸರಕಾರ ಅಧಿಕ ಮುಖಬೆಲೆಯ ಕರೆನ್ಸಿ ನೋಟುಗಳನ್ನು ರದ್ದುಗೊಳಿಸಿದ್ದರಿಂದ ತನ್ನ 1.17 ಕೋಟಿ ರೂ.ಯನ್ನು ಬ್ಯಾಂಕ್ನಲ್ಲಿ ಜಮೆಗೊಳಿಸಲು ಸಾಧ್ಯವಾಗಿಲ್ಲ . ಈಗ ಈ ನೋಟುಗಳನ್ನು ಸ್ವೀಕರಿಸುವಂತೆ ಕೇಂದ್ರ ಸರಕಾರ ಹಾಗೂ ಆರ್ಬಿಐಗೆ ಸೂಚಿಸಬೇಕೆಂದು ಕೋರಿ ತಮಿಳುನಾಡಿನ ಉದ್ಯಮಿಯೊಬ್ಬರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಮಧುರೈಯ ಉದ್ಯಮಿ ಕೆ ರಾಮನ್ ಎಂಬವರು ಅರ್ಜಿ ಸಲ್ಲಿಸಿದವರು. 2016ರ ಡಿಸೆಂಬರ್ 30ರಂದು ತಮಿಳುನಾಡು ಮರ್ಕಂಟೈಲ್ ಬ್ಯಾಂಕ್ನ ತಿರುಪುರ ಶಾಖೆಯಲ್ಲಿ ರದ್ಧಾದ ಕರೆನ್ಸಿ ನೋಟುಗಳನ್ನು ಜಮೆಗೊಳಿಸಲು ಹೋದಾಗ ಅದನ್ನು ಸ್ವೀಕರಿಸಲು ಅವರು ನಿರಾಕರಿಸಿದ್ದಾರೆ. ಆ ಬಳಿಕ ಕೇಂದ್ರ ಸರಕಾರ ಹಾಗೂ ಇತರ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿ ಹಣ ಜಮೆ ಮಾಡಲು ಒಪ್ಪುವಂತೆ ಕೋರಿಕೆ ಸಲ್ಲಿಸಿದರೂ ಅವರು ಪ್ರತಿಕ್ರಿಯಿಸಿಲ್ಲ. ಕಡೆಗೂ ಕಳೆದ ತಿಂಗಳು ಉತ್ತರಿಸಿದ ಆರ್ಬಿಐ ರದ್ದಾದ ಹಣವನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ತಾನು ಹಲವರಿಗೆ ಹಣ ಪಾವತಿಸಲು ಇಟ್ಟಿದ್ದ ಮೊತ್ತವಿದು. ಈಗ ತನ್ನ ವಿರುದ್ಧ ಹಲವರು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದಾರೆ. ಆದ್ದರಿಂದ ರದ್ದಾದ ಹಣವನ್ನು ಜಮೆಗೊಳಿಸಿ ಹೊಸ ನೋಟುಗಳನ್ನಾಗಿ ಪರಿವರ್ತಿಸಲು ಸೂಚಿಸಬೇಕೆಂದು ರಾಮನ್ ಅರ್ಜಿಯಲ್ಲಿ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.