ಪಾಕಿಸ್ತಾನದ ಐಎಸ್ ಐನಿಂದ ಬಿಜೆಪಿ, ಬಜರಂಗದಳ ಹಣ ಪಡೆಯುತ್ತಿದೆ: ದಿಗ್ವಿಜಯ ಸಿಂಗ್ ಗಂಭೀರ ಆರೋಪ

ಹೊಸದಿಲ್ಲಿ, ಸೆ.1: ಬಿಜೆಪಿ ಮತ್ತು ಬಜರಂಗದಳ ಪಾಕಿಸ್ತಾನದ ಐಎಸ್ ಐನಿಂದ ಹಣ ಪಡೆದುಕೊಳ್ಳುತ್ತಿದೆ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.
ಮಹಾರಾಣಾ ಪ್ರತಾಪ್ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಇದೇ ಸಂದರ್ಭ ಅವರು ಐಎಸ್ ಐಗಾಗಿ ಮುಸ್ಲಿಮರಿಗಿಂತ ಹೆಚ್ಚು ಮುಸ್ಲಿಮೇತರರು ಕೆಲಸ ಮಾಡುತ್ತಿದ್ದಾರೆ ಎಂದೂ ಹೇಳಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿರುವ ಅವರು, “ಹಣ ಪಡೆದುಕೊಂಡು ಬಿಜೆಪಿ ಪಾಕಿಸ್ತಾನದ ಐಎಸ್ ಐಗಾಗಿ ಕೆಲಸ ಮಾಡುತ್ತಿದೆ ಎಂದು ನಾನು ಹೇಳಿದ್ದಾಗಿ ಕೆಲ ಟಿವಿ ಚಾನೆಲ್ ಗಳು ಪ್ರಸಾರ ಮಾಡುತ್ತಿವೆ. ಇದು ಸಂಪೂರ್ಣ ತಪ್ಪು” ಎಂದಿದ್ದಾರೆ.
ಇನ್ನೊಂದು ಟ್ವೀಟ್ ನಲ್ಲಿ ಅವರು, “ಹಣ ಪಡೆದುಕೊಂಡು ಐಎಸ್ ಐ ಪರ ಕೆಲಸ ಮಾಡಿದ್ದಕ್ಕಾಗಿ ಮಧ್ಯಪ್ರದೇಶ ಪೊಲೀಸರು ಬಜರಂಗದಳ ಕಾರ್ಯಕರ್ತ ಮತ್ತು ಬಿಜೆಪಿ ಐಟಿ ಸೆಲ್ ನ ಸದಸ್ಯನೋರ್ವನನ್ನು ಬಂಧಿಸಿದ್ದಾರೆ. ನಾನು ಈ ಆರೋಪಗಳನ್ನು ಮಾಡಿದ್ದೇನೆ ಮತ್ತು ನನ್ನ ಮಾತುಗಳಿಗೆ ಬದ್ಧನಾಗಿದ್ದೇನೆ. ಚಾನೆಲ್ ಈ ಪ್ರಶ್ನೆಯನ್ನು ಬಿಜೆಪಿಗೆ ಕೇಳಬಾರದೇಕೆ?” ಎಂದಿದ್ದಾರೆ.