ಅವಮಾನದಿಂದ ನೊಂದು ಬಿಜೆಪಿ ತೊರೆಯಲು ಮುಂದಾಗಿರುವ ಮಾಜಿ ತೃಣಮೂಲ ನಾಯಕ

ಕೋಲ್ಕತಾ,ಸೆ.1: ಕಳೆದ ತಿಂಗಳು ಬಿಜೆಪಿಯನ್ನು ಸೇರಿದ್ದ ಕೋಲ್ಕತಾದ ಮಾಜಿ ಮೇಯರ್ ಸೋವನ್ ಚಟರ್ಜಿ ಅವರು ನಿರಂತರ ಅವಮಾನದಿಂದ ನೊಂದು ಪಕ್ಷವನ್ನು ತೊರೆಯಲು ಯೋಜಿಸಿದ್ದಾರೆ ಎಂದು ಅವರ ನಿಕಟವರ್ತಿ ಬೈಶಾಖಿ ಬ್ಯಾನರ್ಜಿ ತಿಳಿಸಿದ್ದಾರೆ. ಉಭಯ ನಾಯಕರು ಆ.14ರವರೆಗೆ ತೃಣಮೂಲ ಪಕ್ಷದಲ್ಲಿದ್ದರು.
‘ ಬಿಜೆಪಿಯನ್ನು ಸೇರಿದಾಗಿನಿಂದ ಯಾವುದೇ ಕಾರಣವಿಲ್ಲದೆ ನಮ್ಮನ್ನು ನಿರಂತರವಾಗಿ ಅವಮಾನಿಸಲಾಗುತ್ತಿದೆ. ಚಟರ್ಜಿ ಸಕ್ರಿಯ ರಾಜಕೀಯದಿಂದ ದೂರವಿದ್ದರು. ಅವರನ್ನು ಸಕ್ರಿಯ ರಾಜಕೀಯಕ್ಕೆ ಮರಳಿ ಕರೆತರುವುದರಲ್ಲಿ ಮತ್ತು ಬಿಜೆಪಿ ಸೇರುವಂತೆ ಮಾಡುವಲ್ಲಿ ನಾನೇ ಪ್ರಮುಖ ಪಾತ್ರವನ್ನು ವಹಿಸಿದ್ದೆ. ನಮ್ಮನ್ನು ಹೀಗೆ ಅವಮಾನಿಸುತ್ತಿದ್ದರೆ ನಾವು ತೃಣಮೂಲದಲ್ಲಿಯೇ ಇರುತ್ತಿದ್ದೆವು. ನಾವು ಪಕ್ಷವನ್ನು ತೊರೆಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದೇವೆ. ಅಗತ್ಯವಾದರೆ ಬಿಜೆಪಿ ನಾಯಕತ್ವಕ್ಕೆ ರಾಜೀನಾಮೆಯನ್ನು ರವಾನಿಸುತ್ತೇವೆ ’ ಎಂದು ಬ್ಯಾನರ್ಜಿ ಸುದ್ದಿಸಂಸ್ಥೆಗೆ ತಿಳಿಸಿದರು.
ತೃಣಮೂಲ ಶಾಸಕಿ ದೇಬಶ್ರೀ ರಾಯ್ ಅವರು ಬಿಜೆಪಿಗೆ ಸೇರ್ಪಡೆಗೊಳ್ಳುವ ಬಗ್ಗೆ ಚಟರ್ಜಿ ಮತ್ತು ಬ್ಯಾನರ್ಜಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಚಟರ್ಜಿ ಅವರು ತೃಣಮೂಲವನ್ನು ತೊರೆಯುವ ಮುನ್ನ ಅವರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಆಪ್ತರೆಂದು ಪರಿಗಣಿಸಲಾಗಿತ್ತು. ಬಿಜೆಪಿಗೆ ಸೇರ್ಪಡೆಗೊಳ್ಳುವ ಸಂದರ್ಭ ರಾಷ್ಟ್ರವನ್ನು ಬಲಪಡಿಸಲು ‘ದಿಟ್ಟ ಕ್ರಮ’ಗಳನ್ನು ತೆಗೆದುಕೊಂಡಿರುವುದಕ್ಕಾಗಿ ನರೇಂದ್ರ ಮೋದಿ ಸರಕಾರವನ್ನು ಪ್ರಶಂಸಿಸಿದ್ದ ಅವರು,2021ರ ವಿಧಾನಸಭಾ ಚುನಾವಣೆಯಲ್ಲಿ ಮಮತಾರ ವಿರುದ್ಧ ಸ್ಪರ್ಧಿಸಲು ತಾನು ಸಿದ್ಧವಿರುವುದಾಗಿ ಘೋಷಿಸಿದ್ದರು.
ಅಧಿಕೃತ ಜವಾಬ್ದಾರಿಗಳನ್ನು ಕಡೆಗಣಿಸಿ ವೈಯಕ್ತಿಕ ವಿಷಯಗಳತ್ತ ಹೆಚ್ಚು ಗಮನ ನೀಡುತ್ತಿದ್ದಕ್ಕಾಗಿ ಮಮತಾರಿಂದ ತರಾಟೆಗೊಳಗಾದ ಬಳಿಕ ಚಟರ್ಜಿ ಕಳೆದ ವರ್ಷದ ನವೆಂಬರ್ನಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.