ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ಈ ವಿಭಾಗ ಆರಂಭ ಕಡ್ಡಾಯ...

ಹೊಸದಿಲ್ಲಿ: ದೇಶದಲ್ಲಿ ಅಪಘಾತ ಚಿಕಿತ್ಸಾ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ, ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ತುರ್ತು ವೈದ್ಯಕೀಯ ಸೇವಾ ವಿಭಾಗವನ್ನು 2022ರ ಒಳಗಾಗಿ ಸ್ಥಾಪಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಪಡಿಸಿದೆ.
"ತುರ್ತು ವೈದ್ಯಕೀಯ ಸೇವಾ ಪರಿಣತ ವೈದ್ಯರನ್ನು ಬೆಳೆಸುವುದು ನಮ್ಮ ಉದ್ದೇಶ. ಆದ್ದರಿಂದ ತುರ್ತು ಸಂದರ್ಭಗಳಲ್ಲಿ ರೆಫರಲ್ ಆಸ್ಪತ್ರೆಗಳನ್ನು ಸಂಪರ್ಕಿಸುವ ಅನಿವಾರ್ಯತೆ ಉದ್ಭವಿಸದು. ಇದರ ಮುಖ್ಯ ಉದ್ದೇಶವೆಂದರೆ ಅಂತರ್ಶಿಸ್ತೀಯ ಆರೋಗ್ಯ ಸೇವೆಯನ್ನು ಬಲಪಡಿಸುವುದು ಮತ್ತು ದೇಶಾದ್ಯಂತ ಆರೋಗ್ಯ ಸೇವೆಯ ಸಮರ್ಪಕ ನಿರ್ವಹಣೆ" ಎಂದು ಬೋರ್ಡ್ ಆಫ್ ಗವರ್ನರ್ಸ್ ಅಧ್ಯಕ್ಷ ಹಾಗೂ ನೀತಿ ಆಯೋಗದ ಸದಸ್ಯ ವಿ.ಕೆ.ಪಾಲ್ ಸ್ಪಷ್ಟಪಡಿಸಿದರು.
ಹೊಸದಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗ ರಚನೆಯಾಗುವ ವರೆಗೆ ಬೋರ್ಡ್ ಆಫ್ ಗವರ್ನರ್ಸ್, ದೇಶದಲ್ಲಿ ವೈದ್ಯಕೀಯ ಶಿಕ್ಷಣವನ್ನು ನಿಯಂತ್ರಿಸುತ್ತದೆ. ಆರೋಗ್ಯ ಸಚಿವಾಲಯ ಈ ನಿರ್ಧಾರದ ಬಗ್ಗೆ ಸದ್ಯವೇ ಅಧಿಸೂಚನೆ ಹೊರಡಿಸುವ ನಿರೀಕ್ಷೆ ಇದೆ.
ಸಮಗ್ರ ಹಾಗೂ ಸಂಘಟಿತ ಅಪಘಾತ ಕಾಳಜಿ ವ್ಯವಸ್ಥೆ ಭಾರತದಲ್ಲಿ ಇಲ್ಲದ ಕಾರಣ ದೇಶದಲ್ಲಿ ಅಪಘಾತಗಳಲ್ಲಿ ಗಾಯಗೊಂಡವರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ ಹಾಗೂ ಅಂಗವೈಕಲ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಹಲವು ಅಧ್ಯಯನಗಳು ಸ್ಪಷ್ಟಪಡಿವೆ. "ಹಲವು ದೇಶಗಳಲ್ಲಿ ಸುವ್ಯವಸ್ಥಿತ ತುರ್ತು ವೈದ್ಯಕೀಯ ಸೇವಾ ವ್ಯವಸ್ಥೆ ಇದ್ದು, ಅದು ವಿಳಂಬವಿಲ್ಲದೇ ಅಪಘಾತ ಪ್ರಕರಣಗಳಿಗೆ ಸ್ಪಂದಿಸುತ್ತದೆ" ಎಂದು ಪಾಲ್ ವಿವರಿಸಿದರು.