ಸಮಾಜ ಸೇವಕ ಝಾಕಿರ್ ಉಳ್ಳಾಲ ಬಂಧನ ಹೋರಾಟವನ್ನು ಹತ್ತಿಕ್ಕುವ ಷಡ್ಯಂತ್ರ: ರಿಯಾಝ್ ಫರಂಗಿಪೇಟೆ
ಬಂಟ್ವಾಳ : ಉಳ್ಳಾಲನಿವಾಸಿ, ಸಮಾಜ ಸೇವಕ ಹಾಗೂ ಪ್ರಗತಿಪರ ಹೋರಾಟಗಾರ ಝಾಕಿರ್ ಉಳ್ಳಾಲ ಅವರು ಸಾಮಾಜಿಕ ಜಾಲತಾಣಗಳಲ್ಲಿ ಕೋಮುವಾದವನ್ನು ಹಬ್ಬುತ್ತಿದ್ದಾರೆ ಎಂಬ ನೆಪವೊಡ್ಡಿ ಅವರ ಮೇಲೆ ಜಾಮೀನು ರಹಿತ ಪ್ರಕರಣವನ್ನು ದಾಖಲಿಸಿರುವ ಪೊಲೀಸರ ಕ್ರಮವು ರಾಜಕೀಯ ಪ್ರೇರಿತವಾಗಿದ್ದು, ಇದು ಹೋರಾಟಗಳನ್ನು ಹತ್ತಿಕ್ಕುವ ಷಡ್ಯಂತ್ರದ ಭಾಗವಾಗಿರುತ್ತದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಝಾಕಿರ್ ಬಂಧನದ ಬಗ್ಗೆ ಮಾತನಾಡಿದ ಅವರು ನಿರಂತರವಾಗಿ ಕೋಮುವಾದ ಮತ್ತು ಭಯೋತ್ಪಾದನೆಯನ್ನು ಹಬ್ಬುತ್ತಿರುವ ಮಾಧ್ಯಮ ಭಯೋತ್ಪಾದನೆಯ ಬಗ್ಗೆ ಒಂದು ಸಣ್ಣ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸದ ಮಂಗಳೂರು ಪೊಲೀಸರಿಗೆ ಝಾಕಿರ್ ರವರು ಸಾಮಾಜಿಕ ಕಳಕಳಿಯೊಂದಿಗೆ ಆಡಳಿತ ವರ್ಗ, ವಿರೋಧ ಪಕ್ಷ ಮತ್ತು ಸಂಘಪರಿವಾರವನ್ನು ಟೀಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಸಮರ ನಡೆಸಿರುವುದು ಕೋಮುವಾದದ ಹರಡುವಿಕೆಯಾಗಿ ಕಂಡಿರುವುದು ಪೊಲೀಸ್ ಇಲಾಖೆಯ ಕುರುಡುತನವನ್ನು ಪ್ರದರ್ಶಿಸುತ್ತದೆ. ನಿರಂತರವಾಗಿ ಸುಳ್ಳು ಮತ್ತು ಶಾಂತಿ ಕದಡುವ ಮೂಲಕ ಧರ್ಮ - ಧರ್ಮಗಳ ಮಧ್ಯೆ ಹಾಗೂ ವಿವಿಧ ಸಂಘಟನೆಗಳ ಮಧ್ಯೆ ಕಂದಕವನ್ನು ಸೃಷ್ಟಿಸುವ ಹಲವಾರು ಫೇಕ್ ಖಾತೆಗಳ ಬಗ್ಗೆ ಅರಿವಿದ್ದರೂ ಕೂಡ ಅದರ ಬಗ್ಗೆ ಕಾರ್ಯಾಚರಣೆ ನಡೆಸಿ ದುಷ್ಕರ್ಮಿಗಳನ್ನು ಪತ್ತೆ ಹಚ್ಚುವುದನ್ನು ಬಿಟ್ಟು ದಿಟ್ಟತನದಿಂದ ತನ್ನ ಸ್ವಂತ ಖಾತೆಯ ಮೂಲಕವೇ ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಕ ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವವರ ಮೇಲೆ ಈ ರೀತಿ ಕ್ರಮ ಜರಗಿಸಿರುವುದು ಖಂಡನೀಯ ಎಂದು ಅವರು ತಿಳಿಸಿರುತ್ತಾರೆ.
ಹೋರಾಟಗಾರರಿಗೆ ಈ ರೀತಿಯ ಪ್ರಕರಣಗಳು ಸಾಮಾನ್ಯವಾಗಿದ್ದು ಇದರಿಂದಾಗಿ ನಾವು ಧೃತಿಗೆಡಬೇಕಾದ ಅವಶ್ಯಕತೆ ಇಲ್ಲ. ಬದಲಾಗಿ ಇದರ ವಿರುದ್ಧ ಕಾನೂನು ಹೋರಾಟವನ್ನು ಮಾಡಿ ಇಂತಹ ರಾಜಕೀಯ ಷಡ್ಯಂತ್ರಗಳನ್ನು ಸೋಲಿಸಬೇಕಾಗಿದೆ. ಆದ್ದರಿಂದ ಝಾಕಿರ್ ಪರವಾಗಿರುವ ಎಲ್ಲಾ ಹೋರಾಟಗಳಿಗೆ ಎಸ್ಡಿಪಿಐ ಬೆಂಬಲವನ್ನು ನೀಡಿ ಕಾನೂನು ನೆರವನ್ನು ನೀಡಲಿದೆ ಎಂದು ಅವರು ತಿಳಿಸಿದರು.





