ಸುಳ್ಳು ಆರೋಪ ಒಪ್ಪಿಕೊಳ್ಳುವಂತೆ ಕುಲಭೂಷಣ್ ಜಾಧವ್ ಗೆ ಪಾಕ್ ತೀವ್ರ ಒತ್ತಡ
ವಿದೇಶಾಂಗ ವ್ಯವಹಾರಗಳ ಸಚಿವಾಲಯ
ಹೊಸದಿಲ್ಲಿ, ಸೆ.2: ಪಾಕಿಸ್ತಾನದಲ್ಲಿ ಮರಣ ದಂಡನೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲ್ಭೂಷಣ್ ಜಾಧವ್ ಅವರಲ್ಲಿ ಸುಳ್ಳು ಆರೋಪಗಳನ್ನು ಒಪ್ಪಿಕೊಳ್ಳವಂತೆ ಪಾಕಿಸ್ತಾನ ತೀವ್ರ ಒತ್ತಡ ಹೇರಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೋಮವಾರ ಹೇಳಿದೆ.
ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನ್ ನ ಉಸ್ತುವಾರಿ ಅಧಿಕಾರಿಯಾಗಿರುವ ಗೌರವ್ ಅಹ್ಲುವಾಲಿಯಾ ಸೋಮವಾರ ಜಾಧವ್ ಅವರನ್ನು ಭೇಟಿಯಾದರು.
ಭಾರತದ ನಿವೃತ್ತ ನೌಕಾಪಡೆ ಅಧಿಕಾರಿ ಕುಲ್ಭೂಷಣ್ ಜಾಧವ್ ಅವರಿಗೆ ಪಾಕ್ ನೀಡಿರುವ ಮರಣದಂಡನೆಗೆ ಅಂತರ್ ರಾಷ್ಟ್ರೀಯ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಅನಂತರ ಭಾರತೀಯ ರಾಜತಾಂತ್ರಿಕರ ಭೇಟಿಗೆ ಅವಕಾಶ ನೀಡುವಂತೆ ಆದೇಶಿಸಿತ್ತು.
ಅಂತರ್ ರಾಷ್ಟ್ರೀಯ ನ್ಯಾಯಾಲಯದ ನಿರ್ದೇಶನದ ಮೇರೆಗೆ ಪಾಕಿಸ್ತಾನವು ಜಾಧವ್ ಅವರನ್ನು ರಾಜತಾಂತ್ರಿಕರಿಗೆ ಬೇಟಿಯಾಗಲು ಅವಕಾಶ ನೀಡಿತ್ತು. "ನಾವು ಸಮಗ್ರ ವರದಿಗಾಗಿ ಕಾಯುತ್ತಿದ್ದೇವೆ. ಪಾಕಿಸ್ತಾನದ ಅಸಮರ್ಥನೀಯ ಆರೋಪಗಳನ್ನು ಗಿಣಿಪಾಠದಂತೆ ಒಪ್ಪಿಸಲು ಜಾಧವ್ ಮೇಲೆ ತೀವ್ರ ಒತ್ತಡ ಹೇರಿರುವುದು ಸ್ಪಷ್ಟವಾಗಿದೆ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
" ಭಾರತದ ಹೈಕಮಿಷನ್ ನ ಉಸ್ತುವಾರಿ ಅಧಿಕಾರಿ ಅವರಿಂದ ವಿವರವಾದ ವರದಿಯನ್ನು ಸ್ವೀಕರಿಸಿದ ನಂತರ ಮತ್ತು ಐಸಿಜೆ ನಿರ್ದೇಶನಗಳಿಗೆ ಅನುಗುಣವಾಗಿ ಮುಂದಿನ ಕ್ರಮವನ್ನು ನಿರ್ಧರಿಸುತ್ತೇವೆ" ಎಂದು ಅವರು ಹೇಳಿದರು.
ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಜಾಧವ್ ಅವರ ತಾಯಿಯೊಂದಿಗೆ ಮಾತನಾಡಿದ್ದಾರೆ ಮತ್ತು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ವಿವರಿಸಿದ್ದಾರೆ ಎಂದು ಅವರು ನುಡಿದರು.
"ಜಾಧವ್ ಅವರು ಬೇಗನೆ ನ್ಯಾಯವನ್ನು ಪಡೆದುಕೊಳ್ಳುತ್ತಾರೆ ಮತ್ತು ಸುರಕ್ಷಿತವಾಗಿ ಭಾರತಕ್ಕೆ ಮರಳುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ಕೆಲಸ ಮಾಡುವುದನ್ನು ಮುಂದುವರಿಸಲು ಸರ್ಕಾರ ಬದ್ಧವಾಗಿದೆ" ಎಂದು ಕುಮಾರ್ ಹೇಳಿದರು.
ಜಾಧವ್ ಅವರಿಗೆ 2017 ರ ಏಪ್ರಿಲ್ ನಲ್ಲಿ ಬೇಹುಹಾರಿಕೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ವಾರಗಳ ನಂತರ, ಜಾಧವ್ ಅವರ ನೆರವಿಗೆ ಕಾನ್ಸುಲರ್ ಪ್ರವೇಶವನ್ನು ನಿರಾಕರಿಸಿದ್ದಕ್ಕಾಗಿ ಮತ್ತು ಮರಣದಂಡನೆಯನ್ನು ಪ್ರಶ್ನಿಸಲು ಭಾರತ ಪಾಕಿಸ್ತಾನದ ವಿರುದ್ಧ ಐಸಿಜೆಯನ್ನು ಸಂಪರ್ಕಿಸಿತ್ತು.
ಜುಲೈ 17 ರಂದು ನಡೆದ ವಿಚಾರಣೆಯ ತೀರ್ಪಿನಲ್ಲಿ, ಜಾಧವ್ ಅವರ ಅಪರಾಧ ಮತ್ತು ಶಿಕ್ಷೆಯ ಬಗ್ಗೆ "ಪರಿಣಾಮಕಾರಿ" ಪರಿಶೀಲನೆ ನಡೆಸಲು ಐಸಿಜೆ ಪಾಕಿಸ್ತಾನಕ್ಕೆ ಆದೇಶ ನೀಡಿತ್ತು .