ಪಿ.ಚಿದಂಬರಂಗೆ ಇನ್ನೂ 2 ದಿನಗಳ ಸಿಬಿಐ ಕಸ್ಟಡಿ ವಿಸ್ತರಣೆ

ಹೊಸದಿಲ್ಲಿ, ಸೆ.3: ಐಎನ್ಎಕ್ಸ್ ಮೀಡಿಯಾ ಹಗರಣದ ಆರೋಪಿಯಾಗಿರುವ ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಅವರಿಗೆ ಸೆ. 5ರವರೆಗೆ ಸಿಬಿಐ ಕಸ್ಟಡಿ ವಿಸ್ತರಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಇದೇ ವೇಳೆ ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ "ಯಥಾಸ್ಥಿತಿ" ಯನ್ನು ಕಾಯ್ದುಕೊಳ್ಳುವಂತೆ ಆದೇಶಿಸಿದೆ.
74 ವರ್ಷದ ನಾಯಕನನ್ನು ತಿಹಾರ್ ಜೈಲಿಗೆ ಕಳುಹಿಸಬಾರದು ಎಂದು ಚಿದಂಬರಂ ಅವರ ವಕೀಲರು ಮನವಿ ಮಾಡಿದ ನಂತರ ನ್ಯಾಯಾಲಯವು ನಿನ್ನೆ ಒಂದು ದಿನ ಸಿಬಿಐ ಕಸ್ಟಡಿಯನ್ನು ವಿಸ್ತರಿಸಿತ್ತು.
ಚಿದಂಬರಂ 15 ದಿನಗಳ ಕಸ್ಟಡಿ ಸೆಪ್ಟೆಂಬರ್ 5 ರಂದು ಮುಕ್ತಾಯಗೊಳ್ಳುತ್ತದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದ ನಂತರ ಕಸ್ಟಡಿ ವಿಸ್ತರಣೆಯಾಗಿದೆ. "ನಾವು ನಿನ್ನೆ ತಪ್ಪು ಹೇಳಿಕೆ ನೀಡಿದ್ದೇವೆ" ಎಂದು ಸಿಬಿಐ ಒಪ್ಪಿಕೊಂಡಿದೆ.
"ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯದ ವ್ಯಾಪ್ತಿಯನ್ನು ನಾವು ಆಕ್ರಮಿಸಿಕೊಳ್ಳಬಾರದು ಎಂಬ ಅರಿವು ನಮಗಿದೆ" ಎಂದು ಹೇಳಿದ್ದ ನ್ಯಾಯಮೂರ್ತಿಗಳಾದ ಆರ್ ಭಾನುಮತಿ ಮತ್ತು ಎ.ಎಸ್. ಬೋಪಣ್ಣ ಅವರ ನ್ಯಾಯಪೀಠವು ನಿನ್ನೆ ಚಿದಂಬರಂ ಅವರನ್ನು ವಿಶೇಷ ನ್ಯಾಯಾಲಯದ ಮುಂದೆ ಜಾಮೀನು ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿತ್ತು.
ನ್ಯಾಯಾಧೀಶರು ಗುರುವಾರ ಈ ಪ್ರಕರಣದ ವಿಚಾರಣೆ ನಡೆಸಲಿದ್ದಾರೆ ಮತ್ತು ಈ ಮಧ್ಯೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪ್ರಕರಣದಲ್ಲಿ ಬಂಧನದಿಂದ ರಕ್ಷಣೆಗಾಗಿ ಚಿದಂಬರಂ ಅವರ ಮನವಿಯ ಬಗ್ಗೆ ನ್ಯಾಯಾಲಯವು ಗುರುವಾರ ತನ್ನ ತೀರ್ಪನ್ನು ನೀಡಲಿದೆ. ಚಿದಂಬರಂ 2007 ರಲ್ಲಿ ಹಣಕಾಸು ಸಚಿವರಾಗಿದ್ದಾಗ, ಅವರ ಮಗ ಕಾರ್ತಿ ಚಿದಂಬರಂ ಅವರ ಆದೇಶದ ಮೇರೆಗೆ, ಅವರ ಪಾತ್ರಕ್ಕಾಗಿ ಕಿಕ್ಬ್ಯಾಕ್ ಪಡೆದಿದ್ದಾರೆ .ಐಎನ್ಎಕ್ಸ್ ಮೀಡಿಯಾದಲ್ಲಿ ವಿದೇಶಿ ನಿಧಿಯನ್ನು ಭಾರಿ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.