ಅಕ್ರಮ ಕಟ್ಟಡ ನಿರ್ಮಿಸಿದರೆ ಕಠಿಣ ಕ್ರಮ ಕೈಗೊಳ್ಳಲು ಬಿಬಿಎಂಪಿ ಚಿಂತನೆ
ಬೆಂಗಳೂರು, ಸೆ.3: ಬಿಬಿಎಂಪಿ ಸಿದ್ಧಪಡಿಸಿರುವ ಹೊಸ ‘ಬಿಬಿಎಂಪಿ ಕಟ್ಟಡ ನಿರ್ಮಾಣ ಕರಡು ಬೈಲಾ- 2019’ದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ತಡೆಗೆ ಸಾಕಷ್ಟು ಅಂಶಗಳನ್ನು ಸೇರಿಸಲಾಗಿದ್ದು, ಪ್ರಮುಖವಾಗಿ ನಕ್ಷೆ ಮಂಜೂರಾತಿ ಪಡೆದ ನಂತರ ಬೈಲಾ ಪ್ರಕಾರ ಕಟ್ಟಡ ನಿರ್ಮಿಸದೆ ಹೋದರೆ ಕಠಿಣ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದೆ.
ಬೈಲಾದಲ್ಲಿ ದಂಡ ವಿಧಿಸುವುದು, ಕಟ್ಟಡವನ್ನು ಬಿಬಿಎಂಪಿ ವಶಕ್ಕೆ ಪಡೆಯುವುದು, ಒಡೆದು ಹಾಕುವುದು ಸೇರಿ ಇನ್ನಿತರ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಎಲ್ಲ ರೀತಿಯ ದಾಖಲೆಗಳನ್ನು ಪಡೆಯುವುದಕ್ಕೆ ಆನ್ಲೈನ್ ವ್ಯವಸ್ಥೆ ಸಹ ಮಾಡಲಾಗುತ್ತಿದೆ. ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿ, ಪರಿಷ್ಕರಿಸಿ ಅನುಮೋದಿಸಿ ರಾಜ್ಯ ಸರಕಾರಕ್ಕೆ ಕಳುಹಿಸಲಾಗುತ್ತದೆ. ಸರಕಾರ ಅನುಮೋದನೆ ನೀಡಿದ ನಂತರ ಹೊಸ ಬೈಲಾ ಜಾರಿಗೆ ಬರಲಿದೆ.
ಇನ್ನು ನಗರದಲ್ಲಿ ಮೂರು ಅಂತಸ್ತಿಗಿಂತ ಹೆಚ್ಚಿನ ಕಟ್ಟಡ ನಿರ್ಮಾಣದ ವೇಳೆ ನಕ್ಷೆ ಉಲ್ಲಂಘಿಸಿದರೆ ನಿರ್ಮಾಣಗೊಂಡ ಕಟ್ಟಡದ ಶೇ.10ರಷ್ಟು ವಶಕ್ಕೆ, ಕಟ್ಟಡ ನಿರ್ಮಾಣಕ್ಕೆ 12 ಇಲಾಖೆಯಿಂದ ಕಡ್ಡಾಯವಾಗಿ 20 ಪ್ರಮಾಣ ಪತ್ರ ಪಡೆಯುವುದು, ಬೆಳಗ್ಗೆ 6ರಿಂದ ಸಂಜೆ 6ರ ಒಳಗೆ ಮಾತ್ರ ಕಟ್ಟಡ ನಿರ್ಮಾಣ ಕಾರ್ಯ ನಡೆಸುವುದು ಸೇರಿದಂತೆ ಹೊಸ ನಿಯಮಗಳನ್ನು ಒಳಗೊಂಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಇನ್ನು ಮುಂದೆ ಮೂರು ಅಂತಸ್ತಿಗಿಂತ ಹೆಚ್ಚು ಅಥವಾ ಗುಂಪು ಮನೆಗಳ ನಿರ್ಮಾಣ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿದರೆ ಕ್ರಮವಾಗಿ ಶೇ.10 ಮತ್ತು ಶೇ.5ರಷ್ಟು ಕಟ್ಟಡಗಳನ್ನು ಬಿಬಿಎಂಪಿಗೆ ಬಿಟ್ಟು ಕೊಡುವುದಾಗಿ ಕಟ್ಟಡ ಮಾಲಕರು ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ.
ಕಟ್ಟಡ ನಿರ್ಮಾಣ ನಂತರ ನಕ್ಷೆ ಪ್ರಕಾರ ಮತ್ತು ಬೈಲಾದಲ್ಲಿರುವಂತೆ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂಬುದನ್ನು ಬಿಬಿಎಂಪಿ ಅಧಿಕಾರಿಗಳು ಖಚಿತ ಪಡಿಸಿದರೆ, ಒಪ್ಪಂದವನ್ನು ರದ್ದು ಮಾಡಿ, ಕಟ್ಟಡ ಮಾಲಕರಿಗೆ ಅದನ್ನು ಬಿಟ್ಟು ಕೊಡಲಾಗುತ್ತದೆ. ಒಂದು ವೇಳೆ ಬೈಲಾ ಮತ್ತು ನಕ್ಷೆ ಉಲ್ಲಂಘಿಸಿದ್ದರೆ ಒಪ್ಪಂದದಂತೆ ಶೇ.10ರಷ್ಟು ಮತ್ತು ಶೇ.5ರಷ್ಟು ಭಾಗವನ್ನು ಬಿಬಿಎಂಪಿ ವಶಕ್ಕೆ ಪಡೆಯಲಿದೆ. ನಂತರ ಅಕ್ರಮ ನಿರ್ಮಾಣವನ್ನು ತೆರವು ಮಾಡಲಾಗುತ್ತದೆ.
ನೂತನ ಬೈಲಾದಲ್ಲಿ ಮನೆ ಮಾಲಕರಿಗೆ ಅನುಕೂಲವಾಗುವ ಕೆಲವು ಅಂಶಗಳನ್ನು ಸೇರಿಸಲಾಗಿದೆ. ಅದರಂತೆ ಕಟ್ಟಡ ನಿರ್ಮಾಣದ ವೇಳೆ ಶೇ.5ರಷ್ಟು ಬೈಲಾದ ನಿಯಮಗಳನ್ನು ಉಲ್ಲಂಘಿಸಿದರೆ, ಅದಕ್ಕೆ ಯಾವುದೇ ಶಿಕ್ಷೆ ವಿಧಿಸುವಂತಿಲ್ಲ. ಆದರೆ, ಕಟ್ಟಡ ಮಾಲಕರಿಗೆ ಶೋಕಾಸ್ ನೋಟಿಸ್ ನೀಡಿ ಉಲ್ಲಂಘನೆಗೆ ಕಾರಣ ಪಡೆಯಲಾಗುತ್ತದೆ.
ಜಲಮಂಡಳಿಯಿಂದ ನೀರು ಮತ್ತು ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ ಪಡೆಯಲು ಕಟ್ಟಡ ನಿರ್ಮಾಣದ ನಂತರ ಪಡೆಯುವ ಸ್ವಾಧೀನಾನುಭವ ಪ್ರಮಾಣ ಪತ್ರ (ಒಸಿ) ಕಡ್ಡಾಯವಾಗಿಸಲಾಗುತ್ತಿದೆ. ಒಂದು ವೇಳೆ ಒಸಿ ಪಡೆಯದಿದ್ದರೆ ನೀರು ಮತ್ತು ವಿದ್ಯುತ್ ಸಂಪರ್ಕ ನೀಡದಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಲಾಗುತ್ತದೆ. ಜತೆಗೆ, ನಕಲಿ ಒಸಿ ಮೂಲಕ ನೀರು ಮತ್ತು ವಿದ್ಯುತ್ ಪಡೆದಿರುವುದು ಕಂಡು ಬಂದರೆ ತಕ್ಷಣ ಸಂಪರ್ಕ ಕಡಿತಗೊಳಿಸುವಂತೆಯೂ ನಿರ್ದೇಶಿಸಲು ಬೈಲಾದಲ್ಲಿ ಅವಕಾಶವಿದೆ.
ಮಳೆ ನೀರು ಕೊಯ್ಲು, ಎಸ್ಟಿಪಿ ಅಳವಡಿಕೆ
108 ಚ.ಮೀ. ವಿಸ್ತಿರ್ಣದ ನಿವೇಶನದಲ್ಲಿ ಕಟ್ಟಡ ನಿರ್ಮಾಣ ಮಾಡಿದರೆ, ಅಲ್ಲಿ ಮಳೆ ನೀರು ಕೊಯ್ಲು ಅಳವಡಿಕೆ ಕಡ್ಡಾಯ ಮಾಡಲಾಗುವುದು. 2,016 ಚ.ಮೀ. ವಿಸ್ತೀರ್ಣದ ನಿವೇಶನದಲ್ಲಿ ಮಳೆ ನೀರು ಕೊಯ್ಲಿಗೆ ಡ್ಯೂಯಲ್ ಪೈಪಿಂಗ್ ವ್ಯವಸ್ಥೆ ಅಳವಡಿಸಬೇಕಿದೆ. 30ರಿಂದ 60 ಲೀಟರ್ ಶೇಖರಣೆ ಸಾಮರ್ಥ್ಯದ ಟ್ಯಾಂಕ್ಗಳನ್ನು ಅಳವಡಿಸುವಂತೆ ಸೂಚಿಸಲಾಗುತ್ತಿದೆ.
ನಿರಾಕ್ಷೇಪಣ ಪತ್ರ ಕಡ್ಡಾಯ
ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯಲು ಟೈಟಲ್ ಡೀಡ್, ಸಿಟಿ ಸರ್ವೇ ಸ್ಕೆಚ್, ಬಿಲ್ಡಿಂಗ್ ಪ್ಲಾನ್ ಸೇರಿದಂತೆ ಒಟ್ಟು 20 ಬಗೆಯ ದಾಖಲೆಗಳ ಅವಶ್ಯಕತೆ ಯಿದೆ. ಅದೇ ರೀತಿ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಸ್ಕಾಂ, ರೈಲ್ವೆ, ಜಿಲ್ಲಾಡಳಿತ, ಬಿಎಂಆರ್ಸಿಎಲ್ ಸೇರಿ 12 ಇಲಾಖೆಗಳಿಂದ ನಿರಾಕ್ಷೇಪಣ ಪತ್ರ ಪಡೆಯುವುದು ಕಡ್ಡಾಯಗೊಳಿಸಲು ಉದ್ದೇಶಿಸಲಾಗಿದೆ.