ಲಂಚ ಸ್ವೀಕರಿಸುತ್ತಿದ್ದಾಗ ರಾಜಸ್ಥಾನ ಸರಕಾರದ ಜಂಟಿ ಕಾರ್ಯದರ್ಶಿ ಸೆರೆ

ಜೈಪುರ,ಸೆ.4: ರಾಜಸ್ಥಾನದ ಗಣಿ ಇಲಾಖೆಯ ಜಂಟಿ ಕಾರ್ಯದರ್ಶಿ ಬಿ.ಡಿ.ಕುಮಾವತ್ ಅವರು ಬುಧವಾರ ನಾಲ್ಕು ಲಕ್ಷ ರೂ.ಗಳ ಲಂಚ ಸ್ವೀಕರಿಸುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ಘಟಕ(ಎಸಿಬಿ)ದ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿದ್ದಾರೆ.
ಗಣಿ ಇಲಾಖೆಯು ದೂರುದಾರನಿಗೆ ವಿಧಿಸಿದ್ದ ದಂಡವನ್ನು ರದ್ದುಗೊಳಿಸಲು ಕುಮಾವತ್ ಲಂಚಕ್ಕಾಗಿ ಬೇಡಿಕೆ ಮಂಡಿಸಿದ್ದರು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದರು.
ವಿಕಾಸ ಡಾಂಘಿ ಮತ್ತು ಓಂ ಸಿಂಗ್ ಇಬ್ಬರು ಮಧ್ಯವರ್ತಿಗಳನ್ನೂ ಬಂಧಿಸಲಾಗಿದೆ. ದೂರುದಾರನಿಂದ ಏಳು ಲ. ರೂ.ಗಳನ್ನು ಪಡೆದಿದ್ದ ಡಾಂಘಿ ಎರಡು ಲ.ರೂ.ಗಳನ್ನು ತಾನಿರಿಸಿಕೊಂಡು ಉಳಿದ ಹಣವನ್ನು ಸಿಂಗ್ಗೆ ನೀಡಿದ್ದ. ಆತ ಒಂದು ಲ.ರೂ.ಗಳನ್ನು ಇರಿಸಿಕೊಂಡು ಉಳಿದ ನಾಲ್ಕು ಲ.ರೂ.ಗಳನ್ನು ಕುಮಾವತ್ ಅವರಿಗೆ ನೀಡಲು ತೆರಳಿದ್ದ. ಕುಮಾವತ್ ಆತನಿಂದ ಲಂಚದ ಹಣ ಸ್ವೀಕರಿಸುತ್ತಿದ್ದಾಗಲೇ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಲಂಚದ ಹಣವನ್ನು ವಶಪಡಿಸಿಕೊಂಡಿರುವ ಎಸಿಬಿ ಮುಂದಿನ ಕ್ರಮವನ್ನು ಕೈಗೊಂಡಿದೆ.
Next Story