ಮುಂಬೈಯಲ್ಲಿ ಭಾರೀ ಮಳೆ: ಎನ್ಡಿಆರ್ಎಫ್ನಿಂದ 1,300 ಜನರ ರಕ್ಷಣೆ

ಮುಂಬೈ, ಸೆ. 4: ಮಹಾರಾಷ್ಟ್ರದ ಮುಂಬೈ ಹಾಗೂ ಇತರ ಭಾಗಗಳಲ್ಲಿ ಬುಧವಾರ ಭಾರೀ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಮಳೆಯ ಹಿನ್ನೆಲೆಯಲ್ಲಿ ಹಲವು ಸ್ಥಳೀಯ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಯಿತು. ವಿಮಾನಗಳು ವಿಳಂಬವಾಗಿ ಸಂಚರಿಸಿತು. ರಸ್ತೆಯಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಾಗಿದವು.
ಮುಂದಿನ 24 ಗಂಟೆಗಳ ಕಾಲ ಮುಂಬೈ ಹಾಗೂ ಸಮೀಪದ ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಪ್ರಕಟಿಸಿದೆ. ಅಲ್ಲದೆ ಈ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಯಾವುದೇ ಪರಿಸ್ಥಿತಿ ನಿಭಾಯಿಸಲು ಸಿದ್ಧರಾಗಿರುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಸಯಾನ್, ವಾಡಾಲಾ, ದಾದರ್, ಪರೇಲ್, ಕಿಂಗ್ಸ್ ಸರ್ಕಲ್, ಮಾತುಂಗ, ಚುನಾಭಟ್ಟಿ ಹಾಗೂ ಅಂಧೇರಿ, ಜೋಗೇಶ್ವರಿ, ಸಂತಾಕ್ರೂಜ್, ಮಲಾಡ್, ಬೋರಿವಿಲಿ, ಮುಲುಂದ್, ಭಾಂಡುಪ್, ಕಂಜುರ್ಮಾರ್, ವಿಕ್ರೋಲಿ, ಕುರ್ಲಾ ಉಪ ನಗರ ಹಾಗೂ ಸುತ್ತಮುತ್ತಲಿನ ಇತರ ಪ್ರದೇಶಗಳು ಜಲಾವೃತವಾಗಿವೆ.
ಕಳೆದ ತಿಂಗಳು ನೆರೆಯಿಂದ ಹಾನಿಗೀಡಾದ ಜಿಲ್ಲೆಗಳಿರುವ ಪಶ್ಚಿಮ ಮಹಾರಾಷ್ಟ್ರದಲ್ಲಿ ಅಣೆಕಟ್ಟಿನ ನೀರಿನ ಹರಿವಿನ ಬಗ್ಗೆ ನಿಗಾ ಇರಿಸುವಂತೆ ಅಧಿಕಾರಿಗಳಿಗೆ ರಾಜ್ಯ ಸರಕಾರ ಸೂಚಿಸಿದೆ.
ರಸ್ತೆಗಳು ಜಲಾವೃತವಾಗಿರುವುದರಿಂದ ವಿದರ್ಭ ವಲಯದ ಗಡ್ಚಿರೋಳಿ ಹಾಗೂ ಗೋಂಡಿಯಾದಲ್ಲಿರುವ 100ಕ್ಕೂ ಅಧಿಕ ಗ್ರಾಮಗಳು, ಕೊಂಕಣ ವಲಯದ ರತ್ನಗಿರಿ ಹಾಗೂ ಸಿಂಧುದುರ್ಗದ ಇತರ ಹಲವು ಗ್ರಾಮಗಳು ಆಯಾ ಜಿಲ್ಲೆಗಳ ಇತರ ಭಾಗಗಳೊಂದಿಗೆ ಸಂಪರ್ಕ ಕಡಿದುಕೊಂಡಿವೆ.
ರಾಯಗಢ ಹಾಗೂ ಸಿಂಧುದುರ್ಗ ಜಿಲ್ಲೆಗಳ ಕೆಲವು ಪಶ್ಚಿಮ ಘಟ್ಟಗಳಲ್ಲಿ ಭೂಕುಸಿತ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಮಳೆಯ ಕಾರಣಕ್ಕೆ ಶಾಲೆಗಳಿಗೆ ಬುಧವಾರ ಕೂಡ ರಜೆ ಘೋಷಿಸಲಾಗಿತ್ತು. ನೆರೆ ಸಂತ್ರಸ್ತ ಸುಮಾರು 1300 ಜನರನ್ನು ಎನ್ಡಿಆರ್ಎಫ್ ರಕ್ಷಿಸಿದೆ.