ರೊಟ್ಟಿ-ಉಪ್ಪಿನ ಮಧ್ಯಾಹ್ನದೂಟವನ್ನು ಬೆಳಕಿಗೆ ತಂದ ಪತ್ರಕರ್ತನನ್ನು ಗೌರವಿಸಿ: ಮನೋಜ್ ತಿವಾರಿ
ಹೊಸದಿಲ್ಲಿ,ಸೆ.4: ಮಿರ್ಝಾಪುರದ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದೂಟವಾಗಿ ರೊಟ್ಟಿ ಮತ್ತು ಉಪ್ಪು ನೀಡುತ್ತಿದ್ದುದನ್ನು ಬಯಲಿಗೆಳೆದಿರುವ ಪತ್ರಕರ್ತನನ್ನು ಮುಖ್ಯಮಂತ್ರಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರಕಾರವು ಗೌರವಿಸಬೇಕೆಂದು ದಿಲ್ಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಅವರು ಬುಧವಾರ ಆಗ್ರಹಿಸಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು,ತಪ್ಪಿತಸ್ಥರನ್ನು ತನ್ನ ಪಕ್ಷವು ರಕ್ಷಿಸುವುದಿಲ್ಲ. ಕಳಪೆ ಗುಣಮಟ್ಟದ ಆಹಾರ ನೀಡಿಕೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ರಾಜ್ಯ ಸರಕಾರವು ಕ್ರಮವನ್ನು ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.
ಕೇಂದ್ರ ಸರಕಾರದ ಮುಂಚೂಣಿ ಕಾರ್ಯಕ್ರಮವಾಗಿರುವ ಮಧ್ಯಾಹ್ನದೂಟದಲ್ಲಿ ಮಿರ್ಝಾಪುರದ ಶಾಲೆಯ ಮಕ್ಕಳು ನೆಲದಲ್ಲಿ ಕುಳಿತು ರೊಟ್ಟಿ ಮತ್ತು ಉಪ್ಪನ್ನು ತಿನ್ನುತ್ತಿರುವುದನ್ನು ಆ.22ರಂದು ಚಿತ್ರೀಕರಿಸಲಾದ ವೀಡಿಯೊ ಬಹಿರಂಗಗೊಳಿಸಿತ್ತು.
ಸ್ಥಳೀಯ ಪತ್ರಕರ್ತ ಪವನ್ ಜೈಸ್ವಾಲ್ ವಿರುದ್ಧ ವೀಡಿಯೊ ಚಿತ್ರೀಕರಣಕ್ಕೆ ಒಳಸಂಚು ನಡೆಸಿದ್ದ ಆರೋಪವನ್ನು ಹೊರಿಸಿದ್ದ ಪೊಲೀಸರು,ಇದೇ ಆರೋಪದಲ್ಲಿ ಗ್ರಾಮ ಮುಖ್ಯಸ್ಥನ ಪ್ರತಿನಿಧಿಯನ್ನು ಬಂಧಿಸಿದ್ದರು.
ಜೈಸ್ವಾಲ್ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದನ್ನು ಖಂಡಿಸಿ ನೂರಕ್ಕೂ ಅಧಿಕ ಪತ್ರಕರ್ತರು ಮಿರ್ಝಾಪುರ ಜಿಲ್ಲಾಧಿಕಾರಿಗಳ ಕಚೇರಿಯೆದುರು ಪ್ರತಿಭಟನೆ ನಡೆಸಿದ್ದರು. ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಕೂಡ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿತ್ತು ಮತ್ತು ಪ್ರಕರಣಗಳನ್ನು ಹಿಂದೆಗೆದುಕೊಳ್ಳುವತೆ ಆಗ್ರಹಿಸಿತ್ತು.
ಜೈಸ್ವಾಲ್ ವರದಿಯಲ್ಲಿ ಯಾವುದೇ ಸುಳ್ಳಿಲ್ಲ ಎಂದು ಶಾಲೆಯಲ್ಲಿ ಅಡಿಗೆ ಕೆಲಸ ನಿರ್ವಹಿಸುತ್ತಿರುವ ರುಕ್ಮಿಣಿ ದೇವಿ ಸ್ಪಷ್ಟಪಡಿಸಿದ್ದಾರೆ.
ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬೆನ್ನಲ್ಲೇ ಶಾಲೆಯ ಮುಖ್ಯೋಪಾಧ್ಯಾಯ ಮತ್ತು ಗ್ರಾಮ ಪಂಚಾಯತ್ ಕಚೇರಿಯಲ್ಲಿನ ಅಧೀಕ್ಷರನ್ನು ಅಮಾನತುಗೊಳಿಸಲಾಗಿದ್ದು,ಜಿಲ್ಲಾಡಳಿತವು ಘಟನೆಯ ಬಗ್ಗೆ ವಿಚಾರಣೆಯನ್ನು ನಡೆಸುತ್ತಿದೆ.