ಡಿಕೆಶಿ ಅರೆಸ್ಟ್: ದಾವಣಗೆರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ
![ಡಿಕೆಶಿ ಅರೆಸ್ಟ್: ದಾವಣಗೆರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ಡಿಕೆಶಿ ಅರೆಸ್ಟ್: ದಾವಣಗೆರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ](https://www.varthabharati.in/sites/default/files/images/articles/2019/09/4/208463-1567617528.jpg)
ದಾವಣಗೆರೆ: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಬಂಧನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಇಲ್ಲಿನ ಜಯದೇವ ವೃತ್ತದಲ್ಲಿ ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ ಮಂಜಪ್ಪ, ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ರಂಗದಲ್ಲೂ ವಿಫಲರಾಗಿದ್ದಾರೆ. ಅದನ್ನು ಮುಚ್ಚಿಹಾಕಲು ಕಾಂಗ್ರೆಸ್ ನಾಯಕರನ್ನು ಗುರಿ ಮಾಡಿಕೊಳ್ಳುತ್ತಿದ್ದಾರೆ. ದ್ವೇಷದ ರಾಜಕಾರಣ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಮೋದಿಯವರು ಜನತೆಗೆ ನೀಡಿದ ಯಾವ ಆಶ್ವಾಸನೆಗಳು ಇಲ್ಲಿಯವರೆಗೂ ಈಡೇರಿಕೆಯಾಗಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಚೆಕ್ ನಲ್ಲಿ ಹಣ ಪಡೆದಿದ್ದರು. ಆಪರೇಷನ್ ಕಮಲ ಮಾಡಿದ್ದರೂ ಅವರ ಮೇಲೆ ಈಡಿ, ಐಟಿ ಯಾವುದೇ ಕ್ರಮ ಜರುಗಿಸಿಲ್ಲ. ಡಿಕೆ ಶಿವಕುಮಾರ್ ಬಂಧನ ಬಿಜೆಪಿ ರಚಿಸಿದ ಷಡ್ಯಂತರ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆಂದು ಆರೋಪಿಸಿದರು.
ಮಾಜಿ ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್ ಮಾತನಾಡಿ, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯಿದೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಪ್ರಧಾನಿಯವರು ಸರ್ವಾಧಿಕಾರಿ ಧೊರಣೆ ತೋರುತ್ತಿದ್ದಾರೆ. ಅಂದು ಕಾಂಗ್ರೆಸ್ ಪಕ್ಷ ಬ್ರಿಟೀಷರ ವಿರುದ್ದ ಹೋರಾಟ ಮಾಡಿತ್ತು. ಇಂದು ಬಿಜೆಪಿಯ ವಿರುದ್ದ ಹೋರಾಟ ಮಾಡುವ ಪರಿಸ್ಥಿತಿ ಉಂಟಾಗಿರುವುದು ದುರಂತ. ಕೂಡಲೇ ಡಿಕೆ ಶಿವಕುಮಾರ್ ಅವರನ್ನು ಬಂಧನದಿಂದ ಮುಕ್ತಗೊಳಿಸಬೇಕೆಂದು ಒತ್ತಾಯಿಸಿದರು.
ಜಿಪಂ ಸದಸ್ಯ ಬಸವಂತಪ್ಪ, ಪಾಲಿಕೆ ಮಾಜಿ ಸದಸ್ಯರಾದ ದಿನೇಶ್ ಕೆ ಶೆಟ್ಟಿ, ಬಿ.ವೀರಣ್ಣ, ಎಂ.ಹಾಲೇಶ್,ಚಂದ್ರಪ್ಪ, ಎ.ನಾಗರಾಜ್, ಮುಖಂಡರಾದ ಅಯ್ಯೂಬ ಪೈಲ್ವಾನ್, ರಮೇಶ್, ಸೋಮ್ಲಪುರದ ಹನುಮಂತಪ್ಪ, ದಾಕ್ಷಾಯಿಣಮ್ಮ, ಕೇರಂಗಣೇಶ್, ಕೆಂಗಲಹಳ್ಳಿ ಹರೀಶ್, ಕೋಳಿ ಇಬ್ರಾಹಿಂ ಹಾಗೂ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.