ಮನೆ ಬಾಗಿಲಿಗೆ ಮದ್ಯ ಸರಬರಾಜು ಪ್ರಸ್ತಾವ ಕೈಬಿಟ್ಟ ಸರಕಾರ
![ಮನೆ ಬಾಗಿಲಿಗೆ ಮದ್ಯ ಸರಬರಾಜು ಪ್ರಸ್ತಾವ ಕೈಬಿಟ್ಟ ಸರಕಾರ ಮನೆ ಬಾಗಿಲಿಗೆ ಮದ್ಯ ಸರಬರಾಜು ಪ್ರಸ್ತಾವ ಕೈಬಿಟ್ಟ ಸರಕಾರ](https://www.varthabharati.in/sites/default/files/images/articles/2019/09/5/208505-1567685217.gif)
ಬೆಂಗಳೂರು, ಸೆ. 5: ‘ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡುವ ಯಾವುದೇ ಪ್ರಸ್ತಾವ ರಾಜ್ಯ ಸರಕಾರದ ಮುಂದಿಲ್ಲ’ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಸ್ಪಷ್ಟಪಡಿಸಿದ್ದು, ನಿನ್ನೆಯಷ್ಟೇ ನೀಡಿದ್ದ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ನಿನ್ನೆ ನಾನು ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಗುಜರಾತ್ನಲ್ಲಿ ಆನ್ಲೈನ್ ಮೂಲಕ ಮದ್ಯ ಮಾರಾಟ ಮಾಡಲಾಗುತ್ತಿದೆ. ಈ ವ್ಯವಸ್ಥೆಯನ್ನು ರಾಜ್ಯದಲ್ಲೂ ಜಾರಿಗೆ ತರಲು ಚಿಂತನೆ ನಡೆಸಲಾಗುವುದು ಎಂಬ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಮನೆ-ಮನೆಗೂ ಮದ್ಯ ಪೂರೈಕೆ ಮಾಡುವ ಯಾವುದೇ ಪ್ರಸ್ತಾವನೆ ಸರಕಾರದ ಮುಂದಿಲ್ಲ. ಕುಡಿತದಿಂದ ಸಂಸಾರಗಳು ಹಾಳಾಗುತ್ತಿದೆ ಎಂದು ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮನೆ-ಮನೆಗೂ ಮದ್ಯ ಸರಬರಾಜು ಮಾಡುವ ಉದ್ದೇಶ ಸರಕಾರಕ್ಕೆ ಇಲ್ಲ ಎಂದು ನಾಗೇಶ್ ಇದೇ ವೇಳೆ ತಿಳಿಸಿದರು.
ಅಚಾತುರ್ಯ: ಹೊಸದಾಗಿ ಇಲಾಖೆ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ನಿನ್ನೆ ನಡೆದ ಸಣ್ಣ ಅಚಾತುರ್ಯದಿಂದ ನನ್ನ ಹೇಳಿಕೆ ತಪ್ಪಾಗಿ ವರದಿಯಾಗಿದೆ. ಇನ್ನು ಮುಂದೆ ಈ ರೀತಿಯ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಬೇಕಾದರೂ ಸಿಎಂ ಸೇರಿದಂತೆ ಉನ್ನತ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ತಮ್ಮ ಹೇಳಿಕೆ ವಿರುದ್ಧ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿಯವರು ಆಕ್ರೋಶ ವ್ಯಕ್ತಪಡಿಸಿದ್ದು, ಅವರು ನನ್ನ ತಂದೆ ಸಮಾನರು. ಅವರೊಬ್ಬ ಹಿರಿಯ ಮುತ್ಸದ್ದಿ, ಹೀಗಾಗಿ ಅವರ ಅಭಿಪ್ರಾಯವನ್ನು ಸರಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದು ಅವರು ಪ್ರತಿಕ್ರಿಯಿಸಿದರು.
ಸಂಚಾರ ಮಳಿಗೆಯೂ ಇಲ್ಲ: ಕಳಭಟ್ಟಿ ಸಾರಾಯಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ರಾಜ್ಯದ ತಾಂಡಾಗಳಲ್ಲಿ ಸಂಚಾರ ಮದ್ಯ ಮಾರಾಟ ಮಳಿಗೆ ಸ್ಥಾಪಿಸುವ ಹೇಳಿಕೆಯನ್ನು ಹಿಂಪಡೆದಿರುವ ಸಚಿವ ನಾಗೇಶ್, ಸಂಚಾರ ಮದ್ಯ ಮಾರಾಟ ಮಳಿಗೆ ಸ್ಥಾಪಿಸುವ ಪ್ರಸ್ತಾವವೂ ಸರಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಕಳ್ಳಭಟ್ಟಿಯನ್ನು ನಿರ್ಮೂಲನೆ ಮಾಡಬೇಕೆಂಬ ದೃಢ ಸಂಕಲ್ಪ ನಮ್ಮ ಸರಕಾರದ್ದು. ಇದನ್ನು ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಾಂಡಾ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಮದ್ಯಪಾನ ನಿಷೇಧಕ್ಕೆ ಆಗ್ರಹಿಸಿ ಸ್ತ್ರೀ ಶಕ್ತಿ ಗುಂಪುಗಳು ಕೈಗೊಂಡಿರುವ ಹೋರಾಟಕ್ಕೆ ನಮ್ಮ ಬೆಂಬಲವೂ ಇರುತ್ತದೆ. ಹೆಣ್ಣು ಮಕ್ಕಳ ಹಿತರಕ್ಷಣೆಯೂ ರಾಜ್ಯ ಸರಕಾರ ಜವಾಬ್ದಾರಿಯಾಗಿದೆ. ಹೀಗಾಗಿ ರಾಜ್ಯ ಸರಕಾರ ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.
‘ಆನ್ಲೈನ್ ಮೂಲಕ ಮನೆ-ಮನೆಗೆ ಮದ್ಯ ಮಾರಾಟ ಮಾಡುವ ಪ್ರಸ್ತಾವ ಸರಕಾರದ ಮುಂದಿಲ್ಲ. ಆನ್ಲೈನ್ ಮದ್ಯ ಮಾರಾಟ ವ್ಯವಸ್ಥೆ ಜಾರಿ ಮಾಡುವುದಿಲ್ಲ. ಗುಜರಾತ್, ಮಹಾರಾಷ್ಟ್ರದಲ್ಲಿ ಆನ್ಲೈನ್ ವ್ಯವಸ್ಥೆ ಮಾರಾಟ ವ್ಯವಸ್ಥೆ ಇದೆ ಎಂದು ಮಾಹಿತಿ ನೀಡಿದ್ದೇ. ಆದರೆ, ರಾಜ್ಯದಲ್ಲಿ ಆನ್ಲೈನ್ ಮದ್ಯ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ. ಮಾಹಿತಿ ಕೊರತೆ ಹಿನ್ನೆಲೆಯಲ್ಲಿ ನಿನ್ನೆ ನಾನು ನೀಡಿದ್ದ ಹೇಳಿಕೆಗೆ ಕ್ಷಮೆ ಕೋರುವೆ’
-ಎಚ್.ನಾಗೇಶ್, ಅಬಕಾರಿ ಸಚಿವ