ಅಬಕಾರಿ ಸಚಿವರ ಹೇಳಿಕೆಗೆ ಖಂಡನೆ: ಕುಡಿತಕ್ಕೆ ಕಡಿವಾಣ ಹಾಕಲು ಯೋಜನೆ ರೂಪಿಸಲು ಆಗ್ರಹ
ಬೆಂಗಳೂರು, ಸೆ. 5: ‘ಮನೆ-ಮನೆಗೆ ಮದ್ಯ ಸರಬರಾಜು’ ಮಾಡಬೇಕೆನ್ನುವ ಆಲೋಚನೆ ಸರಕಾರದ ಮುಂದಿದೆ ಎಂದು ಹೇಳಿಕೆ ನೀಡಿ ಜನಾಕ್ರೋಶದ ಹಿನ್ನೆಲೆಯಲ್ಲಿ ಅಬಕಾರಿ ಸಚಿವ ನಾಗೇಶ್ ಇಂದು ಸ್ಪಷ್ಟಣೆ ನೀಡಿದ್ದು, ಇದು ಅವರ ವಿವೇಚನಾ ಹೀನ ಕೃತ್ಯಕ್ಕೆ ಸಾಕ್ಷಿಯಾಗಿದೆ ಎಂದು ಎಐಡಿವೈಓ, ಎಐಎಂಎಸ್ಎಸ್ ಖಂಡಿಸಿದೆ.
ಸಮಾಜದ ಸ್ವಾಸ್ಥ್ಯ ಹಾಳುಗೆಡವಿದರೂ ಸರಿಯೇ ಆದಾಯ ಗಳಿಸಬೇಕೆನ್ನುವ ಬೇಜವಾಬ್ದಾರಿ ಮನಸ್ಥಿತಿ ಇಂತಹ ನಿರ್ಧಾರಗಳ ಹಿಂದೆ ಇರುತ್ತದೆ. ವ್ಯಾಪಕವಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಯುವಜನರು ಮತ್ತು ಮಹಿಳೆಯರು ಉದ್ಯೋಗಗಳಿಲ್ಲದೆ ತತ್ತರಿಸುತ್ತಿರುವಾಗ ಸಚಿವರೊಬ್ಬರು ತಮ್ಮ ಸ್ಥಾನದ ಜವಾಬ್ದಾರಿ ಅರಿತು ವರ್ತಿಸದಿರುವುದು ಖಂಡನೀಯ ಎಂದು ಟೀಕಿಸಲಾಗಿದೆ.
2018-19ರ ಹಣಕಾಸು ವರ್ಷದಲ್ಲಿ 19,943 ಕೋಟಿ ರೂ.ಆದಾಯ ಗಳಿಸಿದ ಅಬಕಾರಿ ಇಲಾಖೆ 2019-20ರ ಸಾಲಿಗೆ 20,950 ಕೋಟಿ ರೂ.ಆದಾಯದ ಗುರಿ ನಿಗದಿ ಪಡಿಸಿದೆ. ಇತ್ತೀಚಿನ ದಿನಗಳಲ್ಲಿ ಅಬಕಾರಿ ಇಲಾಖೆ ಆದಾಯದಲ್ಲಿ ಬಾರಿ ಪ್ರಮಾಣದ ಹೆಚ್ಚಳ ಕಂಡಿದೆ. ಆದರೂ ಸರಕಾರದ ಆದಾಯದ ಹಸಿವು ಇಂಗುವುದಿಲ್ಲವೇ? ಎಂದು ಪ್ರಶ್ನಿಸಲಾಗಿದೆ.
ಸರಕಾರವು ಈಗಲಾದರೂ ಕುಡಿತದ ಅಮಲಿನಲ್ಲಿ ಜನರನ್ನು ಮುಳುಗಿಸಬೇಕು ಎಂದು ಆಲೋಚಿಸದೆ, ಜನಮನದಲ್ಲಿರುವ ಭಾವನೆಯನ್ನು ಅರಿತುಕೊಂಡು ‘ಅಬಕಾರಿ’ ಸುಂಕವನ್ನು ಒಂದು ಆದಾಯದ ಮೂಲವಾಗಿ ನೋಡದೆ, ಕುಡಿತಕ್ಕೆ ಕಡಿವಾಣ ಹಾಕುವ ದಿಕ್ಕಿನಲ್ಲಿ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಲಾಗಿದೆ.
ಯುವಜನರಿಗೆ ಮತ್ತು ಮಹಿಳೆಯರಿಗೆ ಉದ್ಯೋಗ ಕಲ್ಪಿಸಲು ಸರಕಾರವು ಶ್ರಮ ವಹಿಸಬೇಕೆ ವಿನಃ ಕುಡಿತವನ್ನು ಉತ್ತೇಜಿಸುವ ಕೆಲಸಕ್ಕೆ ಕೈಹಾಕಬಾರದು ಎಂದು ಎಐಡಿವೈಓ ಕಾರ್ಯದರ್ಶಿ ಡಾ.ಕುಮಾರ್ ಮತ್ತು ಎಐಎಂಎಸ್ಎಸ್ ಶೋಭಾ ಪ್ರಕಟಣೆಯಲ್ಲಿ ಕೋರಿದೆ.