ಅಪಘಾತದ ಬಗ್ಗೆ ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಹೇಳಿದ್ದೇನು?

ಕುಲದೀಪ್ ಸಿಂಗ್ ಸೆಂಗಾರ್
ಹೊಸದಿಲ್ಲಿ, ಸೆ.6: ರಾಯಬರೇಲಿ ಹೆದ್ದಾರಿಯಲ್ಲಿ ನಡೆದ ಕಾರು- ಲಾರಿ ಢಿಕ್ಕಿ ಘಟನೆ, ಕುಲದೀಪ್ ಸಿಂಗ್ ಸೆಂಗಾರ್ ನನ್ನನ್ನು ಕೊಲ್ಲಿಸಲು ರೂಪಿಸಿದ ಸಂಚು ಎಂದು ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಹೇಳಿದ್ದಾಳೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಈ ಬಗ್ಗೆ ಯಾವ ಸಂದೇಹವೂ ಇಲ್ಲ ಎಂದು ಟೈಮ್ಸ್ ಆಫ್ ಇಂಡಿಯಾ ಜತೆ ಏಮ್ಸ್ ಆಸ್ಪತ್ರೆಯಿಂದ ದೂರವಾಣಿಯಲ್ಲಿ ಮಾತನಾಡಿದ ಆಕೆ ಸ್ಪಷ್ಟಪಡಿಸಿದ್ದಾಳೆ. ಜುಲೈ 28ರಂದು ನಡೆದ ಈ ಅಪಘಾತದಲ್ಲಿ ಸಂತ್ರಸ್ತೆಯ ಜತೆಗಿದ್ದ ಇಬ್ಬರು ಸಂಬಂಧಿಕರು ಮೃತಪಟ್ಟಿದ್ದು, ವಕೀಲ ಜೀವನ್ಮರಣ ಸ್ಥಿತಿಯಲ್ಲಿದ್ದಾನೆ. ಘಟನೆ ನಡೆದ ಬಳಿಕ ಇದೇ ಮೊದಲ ಬಾರಿಗೆ ಸಂತ್ರಸ್ತೆ ಹೇಳಿಕೆ ನೀಡಿದ್ದಾಳೆ.
ಈ ಢಿಕ್ಕಿ ನಡೆಯುವ ಮುನ್ನ ಉನ್ನಾವೊ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾದ ಸಂದರ್ಭದಲ್ಲಿ ಸೆಂಗಾರ್ ಸಹಚರ ಜೀವ ಬೆದರಿಕೆ ಹಾಕಿದ್ದ. ಈತನ ತಾಯಿ, ಅತ್ಯಾಚಾರ ಪ್ರಕರಣದಲ್ಲಿ ಸಹ ಆರೋಪಿ ಎಂದು ವಿವರಿಸಿದ್ದಾಳೆ. "ನ್ಯಾಯಾಲಯ ಕೊಠಡಿಯ ಹೊರಗೆ ನಮ್ಮ ಗಾರ್ಡ್ಗಳು ಇದ್ದಾಗಲೆಲ್ಲ ಸೆಂಗಾರ್ ಅವರ ಸಹವರ್ತಿಯ ಮಗ ನನ್ನ ಹತ್ತಿರ ಬಂದು ತಾಯಿಯ ವಿರುದ್ಧದ ದೂರು ವಾಪಸ್ ಪಡೆಯದಿದ್ದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ" ಎಂದು ಹೇಳಿದ್ದಾಳೆ.
ಈ ಬಗ್ಗೆ ಪೊಲೀಸರಿಗೆ ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಹಲವು ಪತ್ರ ಬರೆದಿದ್ದಾಗಿ ಆಕೆ ಹೇಳಿದ್ದಾಳೆ. ಈ ವಿವರಗಳನ್ನು ಸಿಬಿಐಗೂ ನೀಡಿದ್ದಾಗಿ ಸ್ಪಷ್ಟಪಡಿಸಿದ್ದಾಳೆ. "ಜುಲೈ 28ರಂದು ನಾವು ಕಾರಿನಲ್ಲಿ ಹೋಗುತ್ತಿದ್ದಾಗ ಟ್ರಕ್ ನೇರವಾಗಿ ನಮ್ಮತ್ತ ರಭಸದಿಂದ ಮುನ್ನುಗ್ಗಿ ಕಾರಿಗೆ ಢಿಕ್ಕಿ ಹೊಡೆಯಿತು. ಇದು ನನ್ನನ್ನು ಕೊಲ್ಲಲು ಸೆಂಗಾರ್ ರೂಪಿಸಿದ ಸಂಚು. ಜೈಲಿನಲ್ಲಿದ್ದುಕೊಂಡೇ ಆತ ಏನು ಮಾಡಲೂ ಸಿದ್ಧ" ಎಂದು ಆಪಾದಿಸಿದಳು