ಭಯೋತ್ಪಾದನೆ ವಿರೋಧಿ ಕಾನೂನು ವಿರುದ್ಧದ ಮನವಿ ವಿಚಾರಣೆ: ಸುಪ್ರೀಂಕೋರ್ಟ್ನಿಂದ ಕೇಂದ್ರಕ್ಕೆ ನೋಟಿಸ್

ಹೊಸದಿಲ್ಲಿ, ಸೆ. 6: ಒಬ್ಬ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಘೋಷಿಸಲು ಸರಕಾರಕ್ಕೆ ಅಧಿಕಾರ ನೀಡುವ ಭಯೋತ್ಪಾದನೆ ತಡೆ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಮನವಿಯ ಕುರಿತಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರಕಾರಕ್ಕೆ ನೋಟಿಸು ಜಾರಿ ಮಾಡಿದೆ.
ಈ ಕಾನೂನು ಬಳಸಿ ಕೇಂದ್ರ ಸರಕಾರ ಜೈಶೆ ವರಿಷ್ಠ ಹಾಫಿಝ್ ಸಯೀದ್, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಾಗೂ ಇತರರನ್ನು ಭಯೋತ್ಪಾದಕರು ಎಂದು ಘೋಷಿಸಿದ ದಿನಗಳ ಬಳಿಕ ಈ ಮನವಿ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಗೆ ಬಂದಿದೆ.
ಸಜಲ್ ಅವಸ್ಥಿ ಹಾಗೂ ಸರಕಾರೇತರ ಸಂಸ್ಥೆ ‘ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್’ (ಎಪಿಸಿಆರ್) ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹಾಗೂ ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರನ್ನು ಒಳಗೊಂಡ ಪೀಠ ಕೇಂದ್ರ ಸರಕಾರಕ್ಕೆ ನೋಟಿಸು ಜಾರಿ ಮಾಡಿದೆ. ಕಾನೂನುಬಾಹಿರ ಚಟುವಟಿಕೆ (ತಡೆ) ತಿದ್ದುಪಡಿ ಕಾಯ್ದೆ ವಿರುದ್ಧ ಸಲ್ಲಿಸಲಾದ ಮನವಿ ತಿದ್ದುಪಡಿ ಮೂಲಭೂತ ಹಾಗೂ ವ್ಯಕ್ತಿ ಗೌರವ ಹಕ್ಕಿನ ಉಲ್ಲಂಘನೆ ಎಂದು ಹೇಳಿದೆ.
ಯುಎಪಿಎ ಆಡಳಿತಾರೂಢ ಸರಕಾರಕ್ಕೆ ಭಯೋತ್ಪಾದನೆ ನಿಗ್ರಹದ ಪೋಷಾಕಿನ ಅಡಿಯಲ್ಲಿ ಪ್ರಜಾಸತ್ತಾತ್ಮಕ ಸಮಾಜದ ಅಭಿವೃದ್ಧಿಗೆ ಹಾನಿ ತರುವ ವಿಚಾರದ ಮೇಲೆ ಭಿನ್ನಾಭಿಪ್ರಾಯದ ಹಕ್ಕಿನ ಮೇಲೆ ಪರೋಕ್ಷವಾಗಿ ನಿರ್ಬಂಧ ಹೇರುವ ಅವಕಾಶ ನೀಡುತ್ತದೆ ಎಂದು ನ್ಯಾಯಪೀಠ ಆಲಿಸಿದ ಅರ್ಜಿಯಲ್ಲಿ ಹೇಳಲಾಗಿದೆ. ಮೂಲದ ಯುಎಪಿಎ ಕಾಯ್ದೆ ಅಡಿಯಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸುವ ಅಥವಾ ಪಾಲ್ಗೊಳುವ, ಭಯೋತ್ಪಾದನೆಗೆ ಸಿದ್ಧತೆ ನಡೆಸುವ, ಭಯೋತ್ಪಾದನೆಗೆ ಉತ್ತೇಜನ ನೀಡುವ ಅಥವಾ ಭಯೋತ್ಪಾದನೆಯಲ್ಲಿ ಪಾಲ್ಗೊಳ್ಳುವ ಗುಂಪುಗಳನ್ನು ಭಯೋತ್ಪಾದನೆ ಸಂಘಟನೆ ಎಂದು ಘೋಷಿಸುವ ಅಧಿಕಾರ ಮಾತ್ರ ಕೇಂದ್ರ ಸರಕಾರಕ್ಕೆ ಇತ್ತು. ಯುಎಪಿಎ ಕಾಯ್ದೆಯ ತಿದ್ದುಪಡಿಗಳಿಗೆ ಕಳೆದ ವರ್ಷ ಸಂಸತ್ತಿನಲ್ಲಿ ಅನುಮೋದನೆ ನೀಡಲಾಗಿತ್ತು.