ಕನ್ಹಯ್ಯ ಕುಮಾರ್, ಇತರರ ವಿರುದ್ಧ ದೇಶದ್ರೋಹ ಪ್ರಕರಣ ಕೈಬಿಟ್ಟ ದಿಲ್ಲಿ ಸರಕಾರ

ಹೊಸದಿಲ್ಲಿ,ಸೆ.6: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯ (ಜೆಎನ್ಯು)ದ ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಹಾಗೂ ಇತರ ವಿದ್ಯಾರ್ಥಿಗಳ ವಿರುದ್ಧ ಹೊರಿಸಲಾಗಿದ್ದ ದೇಶದ್ರೋಹ ಪ್ರಕರಣವನ್ನು ಮುಂದುವರಿಸದಿರಲು ದಿಲ್ಲಿ ಸರಕಾರ ನಿರ್ಧರಿಸಿದೆ.
ಸರಕಾರಿ ಮೂಲಗಳ ಪ್ರಕಾರ, ಕನ್ಹಯ್ಯ ಕುಮಾರ್ ವಿರುದ್ಧ ಪೊಲೀಸರು ದಾಖಲಿಸಿರುವ ಸಾಕ್ಷಿ ಮತ್ತು ಸದ್ಯ ಲಭ್ಯವಿರುವ ದಾಖಲೆಗಳ ಆಧಾರದಲ್ಲಿ ದೇಶದ್ರೋಹ ಪ್ರಕರಣವನ್ನು ದಾಖಲಿಸಲಾಗಿಲ್ಲ ಎಂಬ ಗೃಹ ಸಚಿವ ಸತ್ಯೇಂದ್ರನಾಥ್ ಅವರ ನಿಲುವಿನ ಆಧಾರದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ನಿರ್ಧಾರವನ್ನು ದಿಲ್ಲಿ ಪೊಲೀಸರಿಗೆ ತಿಳಿಸಲಾಗುವುದು.
2016ರಲ್ಲಿ ಜೆಎನ್ಯು ಕ್ಯಾಂಪಸ್ ನಲ್ಲಿ ದೇಶವಿರೋಧಿ ಘೋಷಣೆಗಳನ್ನು ಕೂಗಿದ ಆರೋಪಕ್ಕೆ ಸಂಬಂಧಿಸಿದಂತೆ ಕನ್ಹಯ್ಯ ಕುಮಾರ್ ಮತ್ತು ಇತರ ಒಂಬತ್ತು ಮಂದಿಯ ವಿರುದ್ಧದ ಪ್ರಕರಣ ಈ ತಿಂಗಳ ಕೊನೆಯಲ್ಲಿ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಭಾರತೀಯ ದಂಡಸಂಹಿತೆಯ ಅಧ್ಯಾಯ ನಾಲ್ಕರಡಿ ಶಿಕ್ಷಾರ್ಹವಾಗಿರುವ ಯಾವುದೇ ಅಪರಾಧವನ್ನು ಕೇಂದ್ರ ಅಥವಾ ರಾಜ್ಯ ಸರಕಾರದ ಪೂರ್ವ ಅನುಮತಿಯ ಹೊರತಾಗಿ ನ್ಯಾಯಾಲಯ ಸ್ವತಿಳುವಳಿಕೆಯಿಂದ ಕೈಗೆತ್ತಿಕೊಳ್ಳುವಂತಿಲ್ಲ ಎಂದು ಅಪರಾಧಿ ಪ್ರಕ್ರಿಯೆ ಸೂಚಿಯ 196ನೇ ವಿಧಿ ತಿಳಿಸುತ್ತದೆ.
ಸದ್ಯ ಜೆಎನ್ಯು ವಿದ್ಯಾರ್ಥಿಗಳ ಮೇಲೆ ಹೊರಿಸಲಾಗಿರುವ ದೇಶದ್ರೋಹ ಪ್ರಕರಣ ಈ ಅಧ್ಯಾಯದ ಅಡಿಯಲ್ಲಿ ಬರುತ್ತದೆ. ಪೊಲೀಸರು ದಿಲ್ಲಿ ಸರಕಾರದ ಅನುಮತಿಯಿಲ್ಲದೆ ದೋಷಾರೋಪಣೆ ದಾಖಲಿಸಿದ್ದಾರೆ ಎಂದು ಆರೋಪಿಸಿರುವ ನ್ಯಾಯಾಲಯ ಕಳೆದ ಜನವರಿ 19ರಂದು ಈ ಪ್ರಕರಣದ ದೋಷಾರೋಪಣೆಯ ವಿಚಾರಣೆ ನಡೆಸಲು ನಿರಾಕರಿಸಿತ್ತು.