ಪುತ್ತೂರು: ಇಂಗು ಗುಂಡಿಯಲ್ಲಿ ಬಾಲಕನ ಮೃತದೇಹ ಪತ್ತೆ
![ಪುತ್ತೂರು: ಇಂಗು ಗುಂಡಿಯಲ್ಲಿ ಬಾಲಕನ ಮೃತದೇಹ ಪತ್ತೆ ಪುತ್ತೂರು: ಇಂಗು ಗುಂಡಿಯಲ್ಲಿ ಬಾಲಕನ ಮೃತದೇಹ ಪತ್ತೆ](https://www.varthabharati.in/sites/default/files/images/articles/2019/09/6/208723-1567782320.jpg)
ಸಾಂದರ್ಭಿಕ ಚಿತ್ರ
ಪುತ್ತೂರು: ತಾಲೂಕಿನ ಚಾರ್ವಾಕ ಗ್ರಾಮದ ಬೊಮ್ಮಳಿಕೆ ನಿವಾಸಿ ಲಕ್ಷ್ಮಣ ಗೌಡ ಎಂಬವರ ಪುತ್ರ, ಕಾಣಿಯೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಹತ್ತನೇ ತರಗತಿಯ ವಿದ್ಯಾರ್ಥಿಯಾಗಿರುವ ಗೌತಮ್(15) ಎಂಬವರ ಮೃತದೇಹವು ಕಾಲೇಜ್ನ ಪಕ್ಕದ ಇಂಗು ಗುಂಡಿಯಲ್ಲಿ ಗುರುವಾರ ರಾತ್ರಿ ಪತ್ತೆಯಾಗಿದೆ.
ಗೌತಮ್ ತನ್ನ ಕಾಲೇಜ್ನಲ್ಲಿ ಗುರುವಾರ ನಡೆಯಲಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಲೆಂದು ಬೆಳಗ್ಗೆ ಮನೆಯಿಂದ ಶಾಲೆಗೆ ಬಂದಿದ್ದು, ಸಂಜೆ ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಮನೆ ಮಂದಿ ಆತನ ಹುಡುಕಾಟ ಆರಂಭಿಸಿದ್ದರು. ಸ್ಥಳೀಯರು ಕಾಲೇಜ್ ಬಳಿಯ ಆಟದ ಮೈದಾನದ ಪಕ್ಕದಲ್ಲಿದ್ದ ವಿಶಾಲ ಹಾಗೂ ಆಳವಿದ್ದ ಇಂಗು ಗುಂಡಿಯ ಬಳಿಯಲ್ಲಿ ಹುಡುಕಾಡುತ್ತಿದ್ದಾಗ ಆತನ ಪ್ಯಾಂಟ್, ಶರ್ಟ್, ಬಸ್ ಪಾಸ್ ಹಾಗೂ ಚಪ್ಪಲಿ ಕಂಡು ಬಂದಿತ್ತು. ಬಳಿಕ ಇಂಗು ಗುಂಡಿಯಲ್ಲಿ ಜಾಲಾಡಿದಾಗ ಮೃತದೇಹ ಪತ್ತೆಯಾಗಿದೆ.
ಗೌತಮ್ ಒಳ ಉಡುಪು ಮಾತ್ರ ಧರಿಸಿದ್ದು, ಸ್ನಾನಕ್ಕೆಂದು ಇಂಗು ಗುಂಡಿಗೆ ಇಳಿದು ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಇಂಗು ಗುಂಡಿಯ ಬಳಿಯಲ್ಲಿ ವಾಚ್ ಒಂದು ಸಿಕ್ಕಿದ್ದು ಇದು ಗೌತಮ್ ಅವರದಲ್ಲ ಎಂದು ತಿಳಿದು ಬಂದಿದೆ. ಇದರಿಂದಾಗಿ ಗೌತಮ್ ಒಬ್ಬರೇ ಸ್ನಾನಕ್ಕೆ ಇಳಿದಿಲ್ಲ. ಈತನೊಂದಿಗೆ ಇತರ ವಿದ್ಯಾರ್ಥಿಗಳೂ ಇದ್ದಿರಬಹುದೆಂದು ಅಂದಾಜಿಸಲಾಗಿದ್ದು, ನೀರಿನಲ್ಲಿ ಮುಳುಗುತ್ತಿದ್ದ ಗೌತಮ್ ಅವರನ್ನು ರಕ್ಷಣೆ ಮಾಡಲಾಗದೆ ಆತನೊಂದಿಗಿದ್ದ ಇತರ ವಿದ್ಯಾರ್ಥಿಗಳು ಪರಾರಿಯಾಗಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.