ಜಮ್ಮು ಕಾಶ್ಮೀರದಲ್ಲಿ ಸಹೋದ್ಯೋಗಿಯ ಬಂಧನ ವಿಚಾರದಲ್ಲಿ ಮೌನ: ಭಾರತೀಯ ವೈದ್ಯಕೀಯ ಸಂಘ ತೊರೆದ ಡಾ. ಬಾಬು

ತಿರುವನಂತಪುರಂ , ಸೆ.7: ಜಮ್ಮು ಕಾಶ್ಮೀರದಲ್ಲಿ ಡಾ. ಒಮರ್ ಸಲೀಂ ಅವರನ್ನು ವಶಕ್ಕೆ ಪಡೆದುಕೊಂಡ ಘಟನೆ ವಿರುದ್ಧ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ರಾಷ್ಟ್ರೀಯ ನಾಯಕತ್ವ ವಹಿಸಿರುವ ಮೌನವನ್ನು ಖಂಡಿಸಿ ಕೇರಳದ ಕಣ್ಣೂರಿನ ಡಾ. ಕೆ.ವಿ. ಬಾಬು ಎಂಬವರು ಐಎಂಎ ರಾಷ್ಟ್ರೀಯ ಮಾಧ್ಯಮ ಸ್ಥಾಯಿ ಸಮಿತಿಗೆ ರಾಜೀನಾಮೆ ನೀಡಿದ್ದಾರೆ.
ಆದರೆ ಬಾಬು ಅವರ ನಿಲುವನ್ನು ಖಂಡಿಸಿರುವ ಐಎಂಎ, ತನ್ನ ತಂಡವೊಂದು ಮುಂದಿನ ವಾರ ಕಾಶ್ಮೀರಕ್ಕೆ ತೆರಳಿ ಬಂಧಿತ ವೈದ್ಯರನ್ನು ಸಂಪರ್ಕಿಸಿ ಪರಿಸ್ಥಿತಿಯನ್ನು ಪರಾಮರ್ಶಿಸಲಿದೆ ಎಂದು ಹೇಳಿದೆ.
ಶ್ರೀನಗರದ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಸಲೀಂ ಅವರನ್ನು ಮಾಧ್ಯಮಗಳ ಜತೆ ಮಾತನಾಡಿದ್ದಕ್ಕೆ ಸುರಕ್ಷಾ ಪಡೆಗಳು ತಮ್ಮ ವಶಕ್ಕೆ ಪಡೆದುಕೊಂಡು ಆಗಸ್ಟ್ 28ರಂದು ಬಿಡುಗಡೆಗೊಳಿಸಿತ್ತು.
ಐಎಂಎ ರಾಷ್ಟ್ರೀಯ ಘಟಕ ಮಾತ್ರ ತನಗೆ ಜಮ್ಮು ಕಾಶ್ಮೀರದ ಐಎಂಎ ಘಟಕದ ಜತೆಗೆ ಸಂಪರ್ಕ ಸಾಧಿಸಲು ಸಾಧ್ಯವಾಗದೇ ಇದ್ದುದರಿಂದ ಘಟನೆಗೆ ಪ್ರತಿಕ್ರಿಯಿಸಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದೆ. “ಏನಾಯಿತೆಂದು ಮೊದಲು ತಿಳಿಯಬೇಕು, ನಮ್ಮ ತಂಡ ಅಲ್ಲಿಗೆ ಈ ವಾರ ತೆರಳಿ ಅಲ್ಲಿನ ವೈದ್ಯರನ್ನು ಭೇಟಿಯಾಗಿ ಸ್ಪಷ್ಟ ಚಿತ್ರಣ ಪಡೆಯಲಿದೆ'' ಎಂದು ಐಎಂಎ ಪ್ರಧಾನ ಕಾರ್ಯದರ್ಶಿ ಆರ್. ವಿ. ಅಶೋಕನ್ ಹೇಳಿದ್ದಾರೆ.
ಆದರೆ ಡಾ ಬಾಬು ಹೇಳುವಂತೆ ಅವರು ಐಎಂಎಗೆ ಹಲವಾರು ಮನವಿಗಳನ್ನು ಸಲ್ಲಿಸಿದ ಹೊರತಾಗಿಯೂ ಸಂಸ್ಥೆ ವೈದ್ಯರ ಬೆಂಬಲಕ್ಕೆ ನಿಂತಿರಲಿಲ್ಲ. ಆದುದರಿಂದ ಐಎಂಎ ಮಾಧ್ಯಮ ಸ್ಥಾಯಿ ಸಮಿತಿಯಲ್ಲಿರುವುದು ವ್ಯರ್ಥ ಎಂದು ರಾಜೀನಾಮೆ ನೀಡಿದ್ದಾಗಿ ಅವರು ತಿಳಿಸಿದ್ದಾರೆ.