ಭ್ರೂಣಹತ್ಯೆ ತಡೆಗೆ ಸರ್ವರ ಸಹಕಾರ ಅಗತ್ಯ: ದ.ಕ. ಜಿಲ್ಲಾ ಆರೋಗ್ಯಧಿಕಾರಿ

ಮಂಗಳೂರು, ಸೆ.7: ಭ್ರೂಣಹತ್ಯೆ ಮನುಕುಲಕ್ಕೆ ಮಾರಕ ಅಷ್ಟೇ ಅಲ್ಲ, ಅಮಾನವೀಯ ಕೃತ್ಯ. ಇದು ಮುಂದುವರಿದ ನಾಗರಿಕ ಸಮಾಜದಲ್ಲಿ ನಡೆಯುತ್ತಿರುವುದು ಅತ್ಯಂತ ಭೀಕರ ಸಂಗತಿಯಾಗಿದೆ. ಇದನ್ನು ತಡೆಯಲು ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದು ಜಿಲ್ಲಾ ಆರೋಗ್ಯಧಿಕಾರಿ ಡಾ.ರಾಮಕೃಷ್ಣ ರಾವ್ ಹೇಳಿದ್ದಾರೆ.
ದ.ಕ. ಜಿಪಂ ನೇತ್ರಾವತಿ ಸಭಾಂಗಣದಲ್ಲಿ ‘ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ’ ಯೋಜನೆಯಡಿ ಶನಿವಾರ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನಸಂಖ್ಯೆ ಇಳಿಮುಖವಾಗುವ ವೇಗದಲ್ಲಿ ಹೆಣ್ಣುಮಕ್ಕಳ ಸಂಖ್ಯೆಯು ನಶಿಸಿ ಹೋಗುತ್ತಿದೆ. ಸಮಾಜದಲ್ಲಿ ಗಂಡು-ಹೆಣ್ಣಿನ ಸಮಾನತೆಯನ್ನು ಕಾಪಾಡಿಕೊಳ್ಳಬೇಕು. ಸ್ಕ್ಯಾನಿಂಗ್ ಸೆಂಟರ್ಗಳು ಜಾಸ್ತಿಯಾಗುತ್ತಾ ಹೋದಂತೆ ಹೆಣ್ಣು ಶಿಶುವನ್ನು ಪ್ರಾರಂಭಿಕ ಹಂತದಲ್ಲೇ ನಾಶ ಮಾಡಲಾಗುತ್ತಿದೆ. ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವೈದ್ಯರು, ತಂತ್ರಜ್ಞರು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ಮೈಸೂರು ವಿಭಾಗದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಸಹನಿರ್ದೇಶಕ ಡಾ. ರಾಮಚಂದ್ರ ಬಾಯರಿ ಅವರು, ಪಿ.ಸಿ ಆ್ಯಂಡ್ ಪಿ.ಎನ್.ಡಿ.ಟಿ ಕಾಯ್ದೆ ಹಾಗೂ ಕಾನೂನು ಅನುಷ್ಠಾನದ ಕುರಿತು ವಿವರಿಸಿದರು.
ಬಳಿಕ ಮಾತನಾಡಿದ ಅವರು, ಸ್ವಸ್ಥ ಸಾಮಾಜಿಕ ಆರೋಗ್ಯವು ಸುಸ್ಥಿರ ಸಾಮಾಜಿಕ ಅಭಿವೃದ್ಧಿಯ ಆಧಾರಸ್ತಂಭ. ಜನಸಂಖ್ಯೆಯೊಂದರಲ್ಲಿ ಲಿಂಗಾನುಪಾತ ಎನ್ನುವುದು ಪ್ರತಿ 1000 ಪುರುಷರ ಸಂಖ್ಯೆಗೆ ಇರುವ ಸ್ತ್ರೀಯರ ಸಂಖ್ಯೆಯನ್ನು ತಿಳಿಸುವ ಒಂದು ಮಾಪನ. ಮಕ್ಕಳ ಲಿಂಗಾನುಪಾತವು 0-6 ವರ್ಷ ವಯೋಮಾನದ ಹುಡುಗಿ, ಹುಡುಗರ ಸಂಖ್ಯಾನುಪಾತ ವಿವರಿಸುತ್ತದೆ. ತಂತ್ರಜ್ಞಾನದ ದುರ್ಬಳಕೆಯು ಭ್ರೂಣ ಲಿಂಗಾನುಪಾತವನ್ನು ವಿಕೃತಗೊಳಿಸುವಲ್ಲಿ ಮಹತ್ತರವಾದ ಕಾರಣವಾಗಿದೆ ಎಂದರು.
ಹೆಣ್ಣು ಭೂಣ ಹತ್ಯೆ ಮಾಡುವಂತೆ ಪ್ರೇರೇಪಿಸುವ ಗರ್ಭಿಣಿಯ ಪೋಷಕರು, ಅತ್ತೆ ಮಾವ ಕುಟುಂಬದ ಸದಸ್ಯರಿಗೆ ಕಾರಾಗೃಹ ಶಿಕ್ಷೆ ಜೊತೆಗೆ ದಂಡ ವಿಧಿಸಲಾಗುವುದು. ವೈದ್ಯರಿಗೆ ಮೊದಲ ಸಲ ಮೂರು ವರ್ಷ ಜೈಲುಶಿಕ್ಷೆ ಹಾಗೂ 50,000 ರೂ. ದಂಡ, ಎರಡನೇ ಬಾರಿಗೆ ಐದು ವರ್ಷ ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಎಂದು ಹೇಳಿದರು.
ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಕಮ್ಯೂನಿಟಿ ಮೆಡಿಸನ್ ಪ್ರಾಧ್ಯಾಪಕಿ ಡಾ.ರಶ್ಮಿ ಮಾತನಾಡಿ, ಕುಟುಂಬವು ಗಂಡಿನಿಂದಲೇ ಮುಂದುವರಿಯುತ್ತದೆ ಎಂಬ ಆಧಾರದ ಮೇಲೆ ಹುಟ್ಟುಹಾಕಿರುವ ಬಹುಮಟ್ಟಿಗಿನ ಪಿತೃ ಪ್ರಧಾನತೆ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ವ್ಯವಸ್ಥೆಯು ಸಮಾಜದಲ್ಲಿ ಸ್ತ್ರೀಯರ ಎರಡನೇ ದರ್ಜೆಯ ಸ್ಥಾನಮಾನಕ್ಕೆ ಕಾರಣವಾಗಿದೆ. ಭ್ರೂಣದ ಲಿಂಗಾನುಪಾತವು ಅಪಾಯಕಾರಿಯಾಗಿ ಇಳಿಮುಖವಾಗಲು ದಾರಿ ಮಾಡಿಕೊಟ್ಟಿದೆ. ಪಿ.ಸಿ ಆ್ಯಂಡ್ ಪಿ.ಎನ್.ಡಿ.ಟಿ ಕಾಯ್ದೆ ಬಗ್ಗೆ ಜನರಿಗೆ ತಿಳಿದಿದ್ದರೂ ಅದರ ಮಾಹಿತಿ ಕೊರತೆ ಇದೆ ಎಂದು ಹೇಳಿದರು.
ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ.ಪೂರ್ಣಿಮಾ ಮಾತನಾಡಿ, ಗರ್ಭಪಾತ ಹೆಚ್ಚಾಗುತ್ತಿರುವುದಕ್ಕೆ ಹೆಣ್ಣು ಭ್ರೂಣಹತ್ಯೆಯ ಜತೆಗೆ ವಿವಾಹ ಪೂರ್ವ ಗರ್ಭಧಾರಣೆ ಮತ್ತು ಭ್ರೂಣಗಳ ಬೆಳವಣಿಗೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳೂ ಕಾರಣ. ವೈದ್ಯರು, ವೈದ್ಯಕೀಯ ಸೌಲಭ್ಯಗಳು ಸಾಕಷ್ಟು ಸುಧಾರಿಸಿರುವುದರಿಂದ ಭ್ರೂಣದ ಬೆಳವಣಿಗೆಯಲ್ಲಿ ನ್ಯೂನತೆಗಳು ಕಂಡು ಬಂದರೆ, ಅದನ್ನು ಪೋಷಕರ ಗಮನಕ್ಕೆ ತರಲಾಗುತ್ತದೆ. ಕೆಲ ಸಂದರ್ಭ ಮಾತ್ರ ಭ್ರೂಣಹತ್ಯೆಗೆ ಕಾನೂನಿನಲ್ಲಿ ಅವಕಾಶ ಇದೆ ಎಂದು ಹೇಳಿದರು.
ಸಮಾಲೋಚನೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿಖಂದರ್ ಪಾಷ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಸುಂದರ್ ಪೂಜಾರಿ, ಡಾ.ಡಿ.ಕೆ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.







