20 ಎಲ್ಇಡಿ ಟಿವಿಗಳ ಕಳವು: ಆರೋಪಿ ಬಂಧನ
ಬೆಂಗಳೂರು, ಸೆ.7: 20 ಎಲ್ಇಡಿ ಟಿವಿಗಳನ್ನು ಕಳವು ಮಾಡಿದ ಆರೋಪದಡಿ ವ್ಯಕ್ತಿಯೋರ್ವನನ್ನು ಇಲ್ಲಿನ ಬಂಡೇಪಾಳ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜಸ್ತಾನ ರಾಜ್ಯದ ದೇವಾರಾಂ(22) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಬಂಡೇಪಾಳ್ಯದ ಚಂದಾಪುರದಲ್ಲಿ ದುರ್ಗಾರಾಂ ಎಂಬುವರು ಥಾಮ್ಸನ್ ಕಂಪೆನಿಯ ಹೊಸ ಮಳಿಗೆ ಅನ್ನು ಆರಂಭಿಸಲು ಮುಂದಾಗಿ ಮಳಿಗೆಯೊಳಗೆ ಮರಗೆಲಸ ಮಾಡಿಸುತ್ತಿದ್ದರು. ಒಳ ಭಾಗದಲ್ಲಿ ಮರಗೆಲಸ ಮುಗಿದ ನಂತರ ಹೊಸ ಟಿವಿಗಳನ್ನು ತಂದು ಶೇಖರಿಸಲಾಗಿತ್ತು ಎಂದು ಹೇಳಲಾಗುತ್ತಿದೆ.
ಹೊರ ಭಾಗದಲ್ಲಿ ಮರಗೆಲಸ ಮಾಡುತ್ತಿದ್ದ ಆರೋಪಿ ದೇವರಾಂ ಹೊಂಚು ಹಾಕಿ 20 ಟಿವಿಗಳನ್ನು ಕಳವು ಮಾಡಿಕೊಂಡು ತಾನು ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದ ಮಾಗಡಿ ರಸ್ತೆಯ ಟೋಲ್ಗೇಟ್ಗೆ ತಂದಿಟ್ಟುಕೊಂಡಿದ್ದ. ಅವುಗಳನ್ನು ನರೇಂದ್ರ ಎಂಬಾತನ ಮೂಲಕ ಹೊರ ರಾಜ್ಯದಲ್ಲಿ ಮಾರಾಟ ಮಾಡಲು ಸಂಚು ರೂಪಿಸಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ಈ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪದಡಿ ನರೇಂದ್ರ ಸೇರಿ ಇನ್ನಿಬ್ಬರಿಗಾಗಿ ಶೋಧ ನಡೆಸಲಾಗಿದ್ದು, ಬಂಧಿತನಿಂದ 3.66 ಲಕ್ಷ ಮೌಲ್ಯದ 20 ಎಲ್ಇಡಿ ಟಿವಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.