ಪ್ರತಿಯೊಬ್ಬ ಅಕ್ರಮ ವಲಸಿಗನನ್ನೂ ಹೊರಕ್ಕೆಸೆಯಲಾಗುವುದು: ಅಮಿತ್ ಶಾ

ಗುವಹಾಟಿ,ಸೆ.8: ವಿವಾದಾತ್ಮಕ ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿಯ ಅಂತಿಮ ಪಟ್ಟಿಯ ಕುರಿತು ಕೊನೆಗೂ ಮೌನಮುರಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರತಿಯೊಬ್ಬ ಅಕ್ರಮ ವಲಸಿಗನನ್ನು ಹೊರಗೆಸೆಯಲಾಗುವುದು ಎಂದು ಘೋಷಿಸಿದ್ದಾರೆ. ಆಗಸ್ಟ್ 31ರಂದು ಬಿಡುಗಡೆಯಾದ ರಾಷ್ಟ್ರೀಯ ಪೌರತ್ವ ನೋಂದಣಿಯ ಅಂತಿಮ ಪಟ್ಟಿಯಿಂದ 19 ಲಕ್ಷ ಜನರನ್ನು ವಿದೇಶಿಗರು ಎಂದು ಹೊರಗಿಡಲಾಗಿತ್ತು. ಎರಡು ದಿನಗಳ ಅಸ್ಸಾಂ ಭೇಟಿಯಲ್ಲಿರುವ ಶಾ ರವಿವಾರದಂದು ಗುವಹಾಟಿಯಲ್ಲಿ ನಡೆದ ಈಶಾನ್ಯ ಮಂಡಳಿ ಸಭೆಯಲ್ಲಿ ಮಾತನಾಡುತ್ತಾ, ರಾಷ್ಟ್ರೀಯ ಪೌರತ್ವ ನೋಂದಣಿ ಬಗ್ಗೆ ಹಲವರು ಹಲವು ರೀತಿಯ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಭಾರತ ಸರಕಾರ ಒಬ್ಬನೇ ಒಬ್ಬ ಅಕ್ರಮ ವಲಸಿಗನನ್ನೂ ದೇಶದಲ್ಲಿ ಇರಲು ಬಿಡುವುದಿಲ್ಲ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ. ಅದು ನಮ್ಮ ಬದ್ಧತೆ ಎಂದು ತಿಳಿಸಿದ್ದಾರೆ. ಎನ್ಆರ್ಸಿ ಅಂತಿಮ ಪಟ್ಟಿಯಲ್ಲಿ ಕೈಬಿಡಲಾಗಿರುವ ಬೆಂಗಾಳಿ ಹಿಂದುಗಳ ಸಂಖ್ಯೆಯ ಬಗ್ಗೆ ಕೆಲವು ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಬೆಂಗಾಳಿ ಹಿಂದು ಸಮುದಾಯ ಅಸ್ಸಾಂನ ಜನಸಂಖ್ಯೆಯ ಶೇ.18ರಷ್ಟಿದ್ದು ಬಿಜೆಪಿಯ ಮತಬ್ಯಾಂಕ್ ಎಂದೇ ಪರಿಗಣಿಸಲ್ಪಟ್ಟಿದೆ. ಸದ್ಯ ಪಟ್ಟಿಯಲ್ಲಿ ಕೈಬಿಡಲಾಗಿರುವವರು ತಮ್ಮ ಪೌರತ್ವ ಸಾಬೀತುಪಡಿಸಲು ಸಮಯಾವಕಾಶ ನೀಡಲಾಗಿದ್ದು ರಾಜ್ಯದ ಮುಸ್ಲಿಂ ಬಾಹುಳ್ಯದ ಜಿಲ್ಲೆಗಳಲ್ಲಿ ಆತಂಕ ಮತ್ತು ಚಿಂತೆ ಮನೆಮಾಡಿದೆ. ಈ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಅಸ್ಸಾಂನ ಬುಡಕಟ್ಟು ಜನಾಂಗ, ಅಸ್ಸಾಮಿ ಹಿಂದುಗಳು ಮತ್ತು ಬೆಂಗಾಳಿ ಹಿಂದುಗಳ ಮತಗಳನ್ನು ಪಡೆಯಲು ಯಶಸ್ವಿಯಾಗಿದ್ದ ಬಿಜೆಪಿ 14 ಸ್ಥಾನಗಳನ್ನು ಗೆದ್ದುಕೊಂಡಿತ್ತು.