ಯೋಧರ ದೇಶಸೇವೆ ಅತ್ಯಂತ ಮಹತ್ವದ್ದು: ನ್ಯಾ.ಸಂತೋಷ್ ಹೆಗ್ಡೆ
![ಯೋಧರ ದೇಶಸೇವೆ ಅತ್ಯಂತ ಮಹತ್ವದ್ದು: ನ್ಯಾ.ಸಂತೋಷ್ ಹೆಗ್ಡೆ ಯೋಧರ ದೇಶಸೇವೆ ಅತ್ಯಂತ ಮಹತ್ವದ್ದು: ನ್ಯಾ.ಸಂತೋಷ್ ಹೆಗ್ಡೆ](https://www.varthabharati.in/sites/default/files/images/articles/2019/09/8/209048-1567954484.jpg)
ಬೆಂಗಳೂರು, ಸೆ. 8: ‘ನಮ್ಮ ದೇಶದ ಗಡಿ ಕಾಯುತ್ತಾ ನಮ್ಮೆಲ್ಲರನ್ನು ರಕ್ಷಿಸುತ್ತಿರುವ ಯೋಧರ ದೇಶಸೇವೆ, ತ್ಯಾಗ, ಬಲಿದಾನ ಅತ್ಯಂತ ಮಹತ್ವವಾದದ್ದು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಇಂದಿಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಜಾಹಿತ ಸಂರಕ್ಷಣಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾದ ‘ರತ್ನಶ್ರೀ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ಅವರು, ನಾನು ಲೋಕಾಯುಕ್ತ ನ್ಯಾಯಮೂರ್ತಿ ಹುದ್ದೆಯಲ್ಲಿದ್ದಾಗ ಬಹಳಷ್ಟು ಅನ್ಯಾಯ ಕಂಡೆ. ಆಗ ಸಮಾಜದಲ್ಲಿ ಏಕೆ ಈ ರೀತಿ ಆಗುತ್ತೆ ಎಂದಾಗ, ಅದು ವ್ಯಕ್ತಿ ತಪ್ಪಲ್ಲ, ಸಮಾಜದ ತಪ್ಪು ಎಂದು ಭಾವಿಸಿದೆ. ಭ್ರಷ್ಟಾಚಾರ ನಿಗ್ರಹಕ್ಕೆ ಎಲ್ಲರೂ ಬದ್ಧರಾಗಬೇಕು ಎಂದ ಅವರು, 2011ರಲ್ಲಿ ನನಗೆ ಪ್ರಶಸ್ತಿಯಿಂದ ಬಂದ 1 ಕೋಟಿ ರೂ.ಹಣವನ್ನು ಯೋಧರ ಕುಟುಂಬಕ್ಕೆ ನೀಡಿದ್ದೇನೆ ಎಂದರು.
ನಮ್ಮಲ್ಲಿ ಎರಡು ಮೌಲ್ಯಗಳಿವೆ. ಒಂದು ತೃಪ್ತಿ ಮತ್ತು ಮಾನವೀಯತೆ. ದುರಾಸೆಯನ್ನು ಮಟ್ಟ ಹಾಕದಿದ್ದರೆ ನಮ್ಮಲ್ಲೇ ನಮಗೆ ಪೈಪೋಟಿ ಆರಂಭವಾಗುತ್ತದೆ ಎಂದ ಸಂತೋಷ್ ಹೆಗ್ಡೆ, ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ಸಮಾಜದಲ್ಲಿ ಮಕ್ಕಳನ್ನು ಬೆಳೆಸಿ ಎಂದು ಸಲಹೆ ಮಾಡಿದರು.
ಟ್ರಸ್ಟ್ನ ಅಧ್ಯಕ್ಷ ಮಂಜುನಾಥ್ ಮಾತನಾಡಿ ‘ನಮ್ಮ ಈ ಟ್ರಸ್ಟ್ ವತಿಯಿಂದ ದೇಶ ಸೇವೆ ಮಾಡುವ ಯೋಧರಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಪ್ರಶಸ್ತಿ ನೀಡುತ್ತಿದ್ದೇವೆ. ಸಾಧಕರು ಇನ್ನೂ ಹೆಚ್ಚಿನ ಸೇವೆ ಸಮಾಜಕ್ಕೆ ನೀಡಲಿ ಎಂದರು.